Friday, December 30, 2016

ನನ್ನ ಮೆಚ್ಚಿನ ಫಾ.ಚಸರಾ ಹಾಡುಗಳು - ’ಹುಟ್ಟ್ಯಾನ ಕ್ರಿಸ್ತ’

ಕಳೆದ ಹತ್ತು ವರ್ಷಗಳಲ್ಲಿ ಯಾವುದೇ ಕ್ರಿಸ್ಮಸ್ ಸಮಾರಂಭ, ಕಾರ್ಯಕ್ರಮವಿರಲಿ ಅದು ದೊಡ್ಡ ಮಟ್ಟದೋ ಚಿಕ್ಕದೋ, ಏನೇ ಆಗಿರಲಿ ಎರಡು ಹಾಡುಗಳಲ್ಲಿ ಒಂದಂತೂ ಇರಲೇಬೇಕು, ಒಮ್ಮೊಮೆ ಎರಡೂ ಇರಬೇಕು. ಒಂದು ಸಿ.ಡೇವಿಡ್ ರವರ ’ಬಾನಿನಿಂದ ದೂತವೃಂದ ಹಾಡ ಹಾಡ್ಯಾರ’, ಇನ್ನೊಂದು ಚಸರಾ ರವರ ’ಹುಟ್ಟ್ಯಾನ ಕ್ರಿಸ್ತ ಗೋದಲಿಯಾಗ’ . ಈ ಹಾಡುಗಳು ಇಲ್ಲದೇ ಆ ಕಾರ್ಯಕ್ರಮ ಅಪೂರ್ಣವೆನೋ ಅನ್ನುವಷ್ಟು ಜನಪ್ರಿಯ ಈ ಹಾಡುಗಳು. ಪೂಜೆಗಳಲ್ಲೂ ಈ ಹಾಡುಗಳು ಅಷ್ಟೇ ಬಳಕೆಯಲ್ಲಿದೆ.

ನೃತ್ಯಗಳಿಗೆ, ರೂಪಕಗಳಿಗೆ ಇದನ್ನು ಚೆನ್ನಾಗಿಯೇ ಬಳಸಿಕೊಂಡಿದೆ ನಮ್ಮ ಕನ್ನಡ ಜನತೆ. ವೃಂದಗಾನದಲ್ಲಿ ಹಾಡಲು ಸ್ವಲ್ಪ ಕಷ್ಟವೇ ಎನ್ನಿಸುವ ಈ ಹಾಡುಗಳನ್ನು, ನಮ್ಮ ಕನ್ನಡ ಗಾನವೃಂದಗಳು ಸೊಗಸಾಗಿ ಹಾಡುವುದು ಕಳೆದ ಇಪ್ಪತ್ತು ವರ್ಷಗಳಲ್ಲಿ ನಮ್ಮ ಗಾನವೃಂದಗಳ ಗುಣಮಟ್ಟದಲ್ಲಿ ಆಗಿರುವ ಬೆಳವಣಿಗೆಗೆ ಸಾಕ್ಷಿಯಾಗಿದೆ. ಇತ್ತೀಚೆಗೆ ವಿ.ನಾಗನಳ್ಳಿಯ ಗಾನವೃಂದದ ಹಾಡುಗಾರರ ಗಾಯನ ಕೇಳಿ ಮರುಳಾಗಿ ಹೋದೆ. ಯಾವುದೇ ನಗರದ ಗಾನವೃಂದಕ್ಕಿಂತ ಉತ್ತಮವಾಗಿ ಹಾಡುತ್ತಿದ್ದರು ಅಲ್ಲಿನ ಯುವಕರು.

ಚಸರಾರವರ ಗೀತೆಗಳಲ್ಲಿ ’ಹುಟ್ಟ್ಯಾನ ಕ್ರಿಸ್ತ’ ನಿಜಕ್ಕೂ ಅತ್ಯಂತ ಜನಪ್ರಿಯ ಗೀತೆಗಳಲ್ಲಿ ಒಂದು. ’ಸಿಟ್ಟಾಗ ಬ್ಯಾಡ ಸ್ವಾಮಿ’ ಧ್ವನಿಸುರಳಿಯಲ್ಲಿನ ಈ ಹಾಡು ಕೇಳುಗರಿಗೆ ಒಂದು ಹೊಸ ಅನುಭವ ನೀಡುವುದರಲ್ಲಿ ಸಂದೇಹವಿಲ್ಲ. ’ಸ್ಫೂರ್ತಿ’ ’ಸ್ಪರ್ಶಿತ’ ಸ್ಮೃತಿ’ ಹೀಗೆ ಸುಂದರ ಕಾವ್ಯಾತ್ಮಕ ಹೆಸರುಗಳ ನಡುವೆ ’ಸಿಟ್ಟಾಗ ಬ್ಯಾಡ ಸ್ವಾಮಿ’ ಎಂಬುದು ಚಸರಾರವರ ಹೊಸ ಧ್ವನಿಸುರಳಿಯ ಹೆಸರು ಎಂದು ಕೇಳಿದಾಕ್ಷಣ ಆಭಾಸವೆನಿಸಿದ್ದು ನಿಜ. ಧ್ವನಿಸುರಳಿಯ ಮುಖಪುಟ(ಇನ್ ಲೇ ಕಾರ್ಡ್) ಕೂಡ ಸ್ವಲ್ಪ ಹಾರ್ಶ್ ಆಗಿಯೇ ಇತ್ತು. ಧ್ವನಿಸುರಳಿಗೆ ಏಕೆ ಈ ಹೆಸರು? ಆಶಯ? ಎಲ್ಲದರ ಬಗೆಗಿನ ಪ್ರಶ್ನೆಗೆ ಉತ್ತರ ಕೊಡುತ್ತದೆ ’ಹುಟ್ಟ್ಯಾನ ಕ್ರಿಸ್ತ’ ಹಾಡು. 

ಮೊದಲ ಸಾಲಲ್ಲೇ ’ಗೋದಲಿಯಲ್ಲಿ ಹುಟ್ಟಿದ ಯೇಸುವಿಗೆ ಬಂಗಾರ ಯಾಕೆ ತಂದಿರೋ" ಎಂಬ ಪ್ರಶ್ನೆ ಇದೆ. ಅಂದು ಯೇಸುವಿಗೆ  ಬಂಗಾರ ತಂದವರು, ಆ ಮೂವರು ಜ್ಞಾನಿಗಳಲ್ಲಿ ಒಬ್ಬರು. ಆ ಕಾಲದಲ್ಲೇ ಒಬ್ಬ ರಾಜನನ್ನು ಸಂಧಿಸಲು ಹೋದಾಗ ಬಂಗಾರದ ಕಾಣಿಕೆ ಕೊಡುವುದು ವಾಡಿಕೆ ಇತ್ತು. ಜ್ಞಾನಿಗಳಾಗಿದ್ದ , ಪಂಡಿತರಾಗಿದ್ದ ಆ ಜ್ಞಾನಿಗಳಿಗೆ ಯೇಸು ರಾಜನೆಂಬ ಬಲವಾದ ನಂಬಿಕೆ ಇತ್ತು. ಆದರೆ ಯೇಸು ಮುಂದೆ ಕಟ್ಟಿದ್ದು ಹೃದಯಗಳ ಸಾಮ್ರಾಜ್ಯ, ಪ್ರೀತಿ ಕ್ಷಮೆಗಳ ಕೋಟೆ. ಇಂತಹ ರಾಜನಿಗೆ ’ಚಿನ್ನ’ಕ್ಕಿಂತ ಪರಿಶುದ್ದವಾದ ಹೃದಯದ ಕಾಣಿಕೆ ತನ್ನಿರೋ ಎಂಬಲ್ಲಿಗೆ ಎರಡನೆಯ ಸಾಲು ಮೊದಲನೆಯ ಸಾಲಿಗೆ ಉತ್ತರವನ್ನು ಪರಿಹಾರವನ್ನೂ ತರುತ್ತದೆ. ಒಂದು ಸಾಮಾನ್ಯ ಲೋಹ ’ಬಂಗಾರ’ವಾಗುವ ಪ್ರಕ್ರಿಯೆಯಲ್ಲಿ ಅದು ’ಬೆಂಕಿ’ಯಲ್ಲಿ ಶುದ್ಧವಾಗುವಂತೆ ’ಕ್ರಿಸ್ತ’ ಜನನ ನಮ್ಮ ಹೃದಯಗಳ ಪರಿವರ್ತನೆಗೆ ಕಾರಣವಾಗಬೇಕು ಹಾಗೂ ಆ ಪರಿವರ್ತಿತ  ಹೃದಯವೇ ದೊಡ್ಡ ಕಾಣಿಕೆ ಎಂಬುದು ಈ ಸಾಲುಗಳ ಅರ್ಥವೇ ಇರಬೇಕು.

ಮುಂದಿನ ಎರಡು ಚರಣಗಳ ಬಗ್ಗೆ ಬರೆಯಬೇಕಾದೇನಿಲ್ಲ. ಅದು ಐತಿಹಾಸಿಕ. ಪ್ರತಿಯೊಂದು ಸಾಲೂ ನಮ್ಮ ಇತರ ಕ್ರಿಸ್ಮಸ್ ಹಾಡುಗಳಿಗಿಂತ ತೀರ ಭಿನ್ನ ತನ್ನ ಆಶಯದಲ್ಲಿ. ಚಸರಾರವರ ಎಂದಿನ ಆತ್ಮವಿಮರ್ಶೆ, ಧರ್ಮದ ಬಗೆಗಿನ ಕಾಳಜಿ, ಅಸಹಾಯಕತೆ, ಭರವಸೆ ಎಲ್ಲವೂ ಅಲ್ಲಿದೆ.

ಮೊದಲ ಚರಣದಲ್ಲಿ ನಮ್ಮ ಹುಸಿಬದುಕ ಬಗ್ಗೆ ಪಶ್ಚಾತ್ತಾಪವಿದ್ದೂ, ಮತೊಮ್ಮೆ ಯೇಸು ಮರಳಿ ಬರುವಷ್ಟರಲ್ಲಿ ಸರಿಹೋಗುತ್ತದೆ ಎಂಬ ವಾಗ್ದಾನವಿದ್ದರೆ, ಎರಡನೆಯ ಚರಣದಲ್ಲಿ ’ನೀನೇ ನ್ಯಾಯ ಸತ್ಯವನ್ನು ಜಗಕ್ಕೆ, ಜನತೆಗೆ ತರಬೇಕು’ ಎಂಬ ಭಾರವನ್ನು ಯೇಸುವಿನ ಮೇಲೆ ಹೊರಿಸುವ ಸಮರ್ಪಣಾ ಭಾವವಿದೆ.

ಹಾಡು ಇಷ್ಟವಾಗುವಲ್ಲಿ ಸಾಹಿತ್ಯ, ಸಾಹಿತ್ಯದಲ್ಲಿ ಬಳಕೆಯಾಗಿರುವ ಜಾನಪದ ಭಾಷೆ, ಭಾಷೆಯ ಸರಳತೆ, ಸರಳತೆಯ ಹಿಂದಿನ ಗಾಢತೆ, ತೂಕ ಸಹಕಾರಿಯಾಗಿದೆ.  ಅಷ್ಟೇ ಸುಂದರವಾಗಿರುವುದು ಸ್ಟೀಫನ್ ದತ್ತ್ ರವರ ಸಂಗೀತ. ಮೊದಲೇ ಹೇಳಿದಂತೆ ಕ್ರಿಸ್ಮಸ್ ಕಾರ್ಯಕ್ರಮಗಳಲ್ಲಿ ಈ ಹಾಡಿಗೆ ನೃತ್ಯ ಇರಲೇಬೇಕೆನಿಸುವಷ್ಟು ಸುಂದರವಾಗಿದೆ ಇದರ ಸಂಗೀತ ಸಂಯೋಜನೆ. ರಾಜೇಶ್ ಹಾಗೂ ರಮ್ಯರ ಗಾಯನದ ಬಗ್ಗೆ ನಮ್ಮಂಥವರು ಹೇಳಬೇಕಾದೇನಿಲ್ಲ. ಹಾಡಿನ ಪ್ರಾರಂಭದಲ್ಲಿ ಬರುವ ಪ್ರೀಲೂಡ್ ಹಾಗೂ ನಂತರದ "ಏಲೋಹಿಮ್" ಎಂಬ ಲ್ಯಾಟಿನ್ ಸಾಲು ಹಾಡನ್ನು ಆರಂಭದಲ್ಲೇ ಎತ್ತರದಲ್ಲಿ ನಿಲ್ಲಿಸುತ್ತದೆ. ಹಾಡು ಅಲ್ಲಿಂದ ಯಾವುದೇ ರೀತಿಯಲ್ಲಿ ಕೆಳಗಿಳಿಯುವುದೇ ಇಲ್ಲ ತನ್ನ ಗುಣಮಟ್ಟದಲ್ಲಿ.


ಹಾಡಿನ ಮತ್ತೊಂದು ಸುಂದರ ಅಂಶವೆಂದರೆ ಚರಣದ ನಡುವೆ ಬರುವ ’ಆಲಾಪನೆ’. ಕೆಲವೊಂದು ಆಲಾಪನೆಗಳು ಹಾಡಿನೊಳಗೆ ಅದೆಷ್ಟು ಸೇರಿಕೊಂಡಿರುತ್ತದೆ ಎಂದರೆ ಹಾಡನ್ನು, ಆಲಾಪನೆಗಳನ್ನು ಪ್ರತ್ಯೇಕಿಸಿ ನೋಡಲು ಸಾಧ್ಯವಾಗುವುದೇ ಇಲ್ಲ.  ಗೀತ ಚಿತ್ರದ ’ಜೊತೆಯಲ್ಲಿ ಜೊತೆಯಲ್ಲಿ’ ಹಾಡಿನ  ಚರಣದಲ್ಲಿ ಬರುವ,  ’ನಾವಾಡುವ ನುಡಿಯೇ’ ಹಾಡಿನ ಪ್ರಾರಂಭದಲ್ಲಿ ಬರುವ, ’ಕಾದಲ್ ರೋಜವೇ’ ಹಾಡಿನಲ್ಲಿ ಬರುವ  ಅಲಾಪನೆಗಳು ಇದಕ್ಕೆ ಒಂದೆರೆಡು ಉದಾಹರಣೆಗಳು.  ಹಾಗೆಯೇ ’ಹುಟ್ಟ್ಯಾನ ಕ್ರಿಸ್ತ’ ಗೀತೆಯ ಆಲಾಪನೆ ಕೂಡ. ಇಡೀ ಹಾಡಿನ ಆಶಯಕ್ಕೆ, ಜೀವಕ್ಕೆ ಕಳಶವಿಟ್ಟಂತೆ ಬಂದುಹೋಗುವ ಆ ’ಆಲಾಪನೆ’ ಹಾಡಿನ ಮೆರಗನ್ನು ಮತ್ತಷ್ಟು ಹೆಚ್ಚಿಸುತ್ತದೆ. ಕೊಳಲು ವಾದಕ ಬುಟ್ಟೋ ಅವರು ಈ ಆಲಾಪನೆಯನ್ನು ಹಾಡಿದ್ದಾರೆ ಎಂಬ ಆಸಕ್ತಿದಾಯಕ ಮಾಹಿತಿಯನ್ನು ಸ್ವತ: ಸ್ಟೀಫನ್ ದತ್ತ್ ರವರೇ ನೀಡಿದ್ದಾರೆ.

ತಮ್ಮದೇ ಹಾಡುಗಳಲ್ಲಿ ಮೊದಲು ಸಾಹಿತ್ಯ ರಚಿಸುತ್ತಿದ್ದರೇ, ಇಲ್ಲವೇ ಸಂಗೀತ ಮೊದಲೋ ಎಂಬ ಕುತೂಹಲ ಚಸರಾರವರ ಹಾಡುಗಳ ಬಗ್ಗೆ ನನಗಿತ್ತು. ಇದೇ ಕುತೂಹಲ ನನ್ನ ನೆಚ್ಚಿನ ಸಂಗೀತ ನಿರ್ದೇಶಕ ಹಂಸಲೇಖರಾ ಹಾಡುಗಳ ಬಗ್ಗೆಯೂ ಇತ್ತು. ಸಂಗೀತ ಕಾರ್ಯಕ್ರಮವೊಂದರಲ್ಲಿ ಇದೇ ಪ್ರಶ್ನೆಯನ್ನು ಹಂಸಲೇಖಾರಿಗೆ ಕೇಳಿದಾಗ, ಬಹುತೇಕ ಗೀತೆಗಳಲ್ಲಿ ಸಾಹಿತ್ಯ ಸಂಗೀತ ಎರಡೂ ಒಟ್ಟೊಟ್ಟಿಗೆ ಬರುತ್ತದೆ ಎಂಬ ಉತ್ತರ ಅವರಿಂದ ಬಂತು. ’ಹುಟ್ಟ್ಯಾನ ಕ್ರಿಸ್ತ’ ಹಾಡನ್ನು ಅದರ ರೂಪುರೇಷೆ ಸಿದ್ಧಪಡಿಸಿಕೊಂಡು ಸಾಹಿತ್ಯ ಸಂಗೀತದೊಂದಿಗೆ ಒಟ್ಟಿಗೇ ರಚಿಸಿದರು ಎಂಬ ರೀನಿಯವರ ಮಾಹಿತಿ ನನಗೆ ಆಶ್ಚರ್ಯ ತರಿಸಲಿಲ್ಲ. ಎರಡೂ ಒಟ್ಟಿಗೇ ಬಂದಾಗ ಮೂಡಬಹುದಾದ ಸುಂದರ ಕೃತಿಯಂಥಾ ಹಾಡಿಗೆ ಸಾಕ್ಷಿಯಾಗಿದೆ ಈ ಹಾಡು.

ಇದು ’ಹುಟ್ಟ್ಯಾನ ಕ್ರಿಸ್ತ’ನ ಕಥೆಯಾದರೆ, ಇನ್ನೂ ’ಸಂವೇದ್ಯ’ ಧ್ವನಿಸುರಳಿಯ ’ಬಾನಲಿ ದೂತರು ಹಾಡಿದರು’ ಹಾಡಿನ ಬಗ್ಗೆ ಹೇಳದೆ ಈ ಲೇಖನ ಮುಗಿಸಲು ಸಾಧ್ಯವಿಲ್ಲವೇನೋ.  ಕ್ರಿಸ್ತ ಜಯಂತಿಯ ಇಡೀ ಸಾರವನ್ನು ಒಡಲಲ್ಲಿಟ್ಟುಕೊಂಡಂತಿರುವ ಈ ಗೀತೆಯಲ್ಲಿ ಐದು ಚರಣಗಳಿವೆ. ಐದೂ ಚರಣಗಳು ಬೇರೆ ಬೇರೆ ರಾಗ, ಟ್ಯೂನಿನಲ್ಲಿರುವುದು ಗೀತೆಯ ವಿಶೇಷ. ಸಿ. ಅಶ್ವತ್ಥ್‍ರವರ ಗೀತೆಗಳಲ್ಲಿ ಈ ಪ್ರಯೋಗವನ್ನು ನಾವು ಕಾಣಬಹುದು.ಈ ವಿಶೇಷತೆಯ ಹೊರತಾಗಿಯೂ ಸುಂದರ ಸಾಹಿತ್ಯ ಹಾಗೂ ಸಂಗೀತದೊಂದಿಗೆ ಮನಸೆಳೆಯುವ ಗೀತೆ ’ಬಾನಲಿ ದೂತರು ಹಾಡಿದರು’.

ಮೊದಲು ತಿಳಿಸಿದ ಸಿ.ಡೇವಿಡ್‍ರವರ  ರಚನೆಯ ’ಬಾನಿನಿಂದ ದೂತ ವೃಂದ ಹಾಡ ಹಾಡ್ಯಾರ’ ಗೀತೆಯ ಸಾಹಿತ್ಯವೂ ಫಾ.ಚಸರಾರವರದೇ. ಹಾಗೆ ನೋಡಿದರೆ ಫಾ.ಚಸರಾ ಹಾಗೂ ಸಿ.ಡೇವಿಡ್‍ ಜುಗಲ್‍ಬಂದಿಯ ಅನೇಕ ಕ್ರಿಸ್‍ಮಸ್ ಗೀತೆಗಳು ಮನಮೋಹಕವಾಗಿವೆ. ಡೇವಿಡ್‍ರವರ ಆಕರ್ಷಕ ಸಂಗೀತ ಶೈಲಿಗೆ ಅಷ್ಟೇ ಆಕರ್ಷಕವಾದ ಚಸರಾರವರ ಸಾಹಿತ್ಯ ಒದಗಿ ಬಂದು, ಹಾಡುಗಳು ಕನ್ನಡ ಕ್ರೈಸ್ತರ ಮನದಲ್ಲಿ ಉಳಿದುಕೊಂಡಿದೆ. ಅದೆಷ್ಟೋ ಹಾಡುಗಳಿಗೆ ಪೂರ್ತಿ ಚರಣಗಳನ್ನು ಬರೆದರೂ, ಪ್ರಾರಂಭದ ಪಲ್ಲವಿ ಬರೆದವರಿಗೇ ಹಾಡಿನ ಪೂರ್ತಿ ಕ್ರೆಡಿಟ್ ಕೊಡುತ್ತಿದ್ದರು ಎಂಬ ಮಾಹಿತಿ ಫಾ.ಚಸರಾರವರ ದೊಡ್ಡತನಕ್ಕೆ ಸಾಕ್ಷಿಯಾಗಿದೆ. 

"ಮಗು ಜನಿಸುವಾಗ, ಹಾಡು ಹುಟ್ಟುವಾಗ ಕೈಯಲ್ಲಿ ದೀಪ ಇಟ್ಟುಕೊಂಡು ಕಾಯುವುದಷ್ಟೇ ನಮ್ಮ ಕೆಲಸ" ಎಂದು ಹಂಸಲೇಖರವರು ಕಾರ್ಯಕ್ರಮವೊಂದರಲ್ಲಿ ಹೇಳುತ್ತಾರೆ.  ಸಾಮಾನ್ಯರಾದ ನಮಗೆ ಕೆಲವೊಂದು ಹಾಡುಗಳನ್ನು ಕೇಳುವಾಗ ಇದು ಅನ್ವಯಿಸುತ್ತದೇನೋ.......

Wednesday, November 30, 2016

ನನ್ನ ಮೆಚ್ಚಿನ ಫಾ.ಚಸರಾ ಹಾಡುಗಳು - ಭಾಗ 4 - ’ ನನ್ನ ಸ್ವಾರ್ಥ ಮನಸ್ಸಿನ ಈ ಬದಕು ನನ್ನೇಸು ಪ್ರಭುವನ್ನು ಕೊಲ್ಲುತ್ತಿದೆ’

 ’ನನ್ನ ಸ್ವಾರ್ಥ ಮನಸ್ಸಿನ ಈ ಬದಕು ನನ್ನೇಸು ಪ್ರಭುವನ್ನು ಕೊಲ್ಲುತ್ತಿದೆ’, ಸಂವೇದ್ಯದ ಮತ್ತೊಂದು ಸುಂದರ ಗೀತೆ. ಫಾ.ಚಸರಾರವರ ಅತ್ಯಂತ ಭಾವನಾತ್ಮಕ ಗೀತೆಗಳಲ್ಲಿ ಒಂದು. ಮರಿಯಾಪುರದ ಮಹಿಮೆಯಲ್ಲಿನ ಸಂದರ್ಭದ ಹಿನ್ನಲೆಯಿಂದ ಪ್ರತ್ಯೇಕಿಸಿ  ನೋಡಿದಾಗಲೂ ಇದು ಮನಮುಟ್ಟುವಂತ ಗೀತೆ. ಗೀತೆಯ ಮೊದಲ ಸಾಲಿನಲ್ಲೇ ಒಂದು ಸೆಳೆತವಿದೆ. ಸಾಮಾನ್ಯವಾಗಿ ತಪಸ್ಸು ಕಾಲದ ಈ ರೀತಿಯ ಹಾಡುಗಳಲ್ಲಿ, ’ ನಮ್ಮ ಪಾಪಗಳಲಿಂದಲೇ ಯೇಸು ಮರಣ ಹೊಂದಿದರು, ಕೊಲ್ಲಲ್ಪಟ್ಟರು’ ಎಂಬ ಭಾವವಿರುತ್ತದೆ. ಅದು ನಡೆದು ಹೋದ ಅಂದಿನ ಘಟನೆಯ ದಿವ್ಯ ನೆನಪಾಗಿರುತ್ತದೆ.  ಅದರೆ ಈ ಹಾಡಿನಲ್ಲಿ ಬರುವ ’ನನ್ನೇಸು ಪ್ರಭುವನ್ನು ಕೊಲ್ಲುತ್ತಿದೆ’ ಎಂಬ ಸಾಲುಗಳು ಯೇಸುವಿನ ಆ ಸಾವನ್ನು, ನೋವನ್ನು ವರ್ತಮಾನಕ್ಕೆ ತಂದು ಇಳಿಸಿ ಬಿಡುತ್ತದೆ. ’ಕ್ರಿಸ್ತ ಇತಿಹಾಸದವನ್ನಲ್ಲ, ನಮ್ಮ ನಿಮ್ಮೊಡನೆ ಇಂದಿಗೂ ಸ್ಪಂದಿಸುತ್ತಿರುವವನು’ ಎಂಬ ಚಸರಾರವರ ಇನ್ನೆಲ್ಲಿಯದೋ ಸಾಲುಗಳು ಇಲ್ಲಿ ಮತ್ತೆ ನೆನಪಿಗೆ ಬರುತ್ತದೆ.

ಕ್ರಿಸ್ತನ ಸಾವು, ನೋವು, ಅದರ ಕಾರಣ ಇತಿಹಾಸದ ದೃಷ್ಟಿಯಿಂದ ನೋಡಿದಾಗ ನಾವು ನಮ್ಮ ಇಂದಿನ ಜವಬ್ದಾರಿಯಿಂದ ಮೆಲ್ಲಗೆ ನುಣಿಚಿಕೊಳ್ಳುವ ಸಾಧ್ಯತೆಯಿದೆ. ಅಂದಿನ ಜನರು, ಪರಿಸ್ಥಿತಿ ಯೇಸುವಿನ ಸಾವಿಗೆ ಕಾರಣ ಎಂಬದು ಆ ನುಣಿಚಿಕೆಯ ಭಾಗವಾಗಿಬಿಡುತ್ತದೆ. ಆದರೆ ಆದೇ ’ ನನ್ನೇಸು ಪ್ರಭುವನ್ನು ಕೊಲ್ಲುತ್ತಿದೆ’ ಎಂಬುದು ಯೇಸುವಿನ  ಆ ಕೊಲ್ಲುವಿಕೆಯಲ್ಲಿ ನಮ್ಮನೂ ಭಾಗಿಯಾಗಿಸಿ ಬಿಡುತ್ತದೆ, ಅದರಲ್ಲಿ ನಮ್ಮ ಸ್ವಾರ್ಥವನ್ನು ಮುಖ್ಯ ಆರೋಪಿಯನ್ನಾಗಿಸುತ್ತದೆ. ಆ ನಿಟ್ಟಿನಲ್ಲಿ ನೋಡಿದಾಗ ಅದು ಅದ್ಭುತವಾದ  ಆರಂಭಿಕ ಸಾಲುಗಳು. 

ಹಾಡಿನ ಬಗ್ಗೆ ಬರೆಯುವ ಮುನ್ನ ಒಂದು ಘಟನೆಯ ಬಗ್ಗೆ ಹೇಳಬೇಕು. ೨೦೧೪ರಲ್ಲಿ ಚಿಗುರು ಬಳಗವು ಬೈಬಲ್ ಚಿತ್ರ ಪ್ರರ್ದಶನವೊಂದನ್ನು ಬೆಟ್ಟದ ಹಲಸೂರಿನಲ್ಲಿ ಆಯೋಜಿಸಿತ್ತು. ಹಳೆಯ  ಒಡಂಬಡಿಕೆಯಿಂದ ಹೊಸ ಒಡಂಬಡಿಕೆಯ ವಿವಿಧ ಘಟನೆಗಳ ಸುಮಾರು ೨೫೦ಕ್ಕೆ ಹೆಚ್ಚು ಚಿತ್ರಗಳನ್ನು ಒಟ್ಟುಗೂಡಿಸಿದ ಸುಮಾರು ೩೦ ಭಿತ್ತಿ ಚಿತ್ರಗಳ ಸಂಗ್ರಹಗಳ ಪ್ರದರ್ಶನವದು. ಅಂದು ಹಬ್ಬದ ಪೂಜೆಗೆ ಬಂದಿದ್ದ  ಫಾ.ಚಸರಾ, ಪೂಜೆಯ ನಂತರ ನಮ್ಮ ಪ್ರದರ್ಶನಕ್ಕೂ ಬಂದರು. ಬಂದವರೇ,

ಎಲ್ಲಾ ಚಿತ್ರಗಳನ್ನು ಸಾವಕಾಶವಾಗಿ ನೋಡುತ್ತಾ ಬಂದರು. ಪ್ರತಿಯೊಂದನ್ನು ಗಮನಿಸಿದ ನಂತರ ಮತ್ತೆ ಒಂದು ಚಿತ್ರದತ್ತ ಹೋಗಿ ನಿಂತು ನೋಡಿದರು. ನಾವೂ ಸಹಾ ಆ ಚಿತ್ರದತ್ತ ಹೋಗಿ ನಿಂತೆವು. ಅದು ಯೇಸು ಬಂಧನಕ್ಕೆ ಒಳಗಾದ ನಂತರದ ಸುಮಾರು ಐದಾರು ಘಟನೆಯ ಕೊಲಾಜ್ ಚಿತ್ರ. ಯೇಸುವಿಗೆ ಜೂದಾಸ್ ಮುದ್ದಿಡುವುದು, ಸೈನಿಕರ ಛಾಟಿ ಏಟು, ಪೇತ್ರನ ನಿರಾಕರಣೆ, ಕೋಳಿಗಳು, ಯೇಸು ಪೇತ್ರನತ್ತ ನೋಡುತ್ತಿರುವುದು, ಪಿಲಾತ ಯೇಸುವನ್ನು ಜನರ ಮುಂದೆ ನಿಲ್ಲಿಸಿರುವುದು, ಜನ ಕೂಗುತ್ತಿರುವುದು, ರಾಣಿಯ ಬೇಸರ ಎಲ್ಲವೂ ಅದರಲ್ಲಿತ್ತು. 

ಆ ಚಿತ್ರವನ್ನು ನೋಡಿದ ಫಾ.ಚಸರಾ ಪ್ರದರ್ಶನದ ಎಲ್ಲಾ ಚಿತ್ರಗಳಲ್ಲಿ ತಮಗೆ ಅತ್ಯಂತ  ಇಷ್ಟವಾದ ಚಿತ್ರ ಅದು ಎಂದು ನಮ್ಮ ಬಳಿ ಹೇಳಿದರು. ನಂತರ ಚಿತ್ರದ ಒಂದೊಂದು ಭಾಗವನ್ನು ನಮಗೆ  ವಿವರಿಸಲಾರಂಭಿಸಿ, ಕೊನೆಗೆ ನಮ್ಮನ್ನು ಅಭಿನಂದಿಸಿದರು. ಆ ಕೊಲಾಜಿಗೆ ಚಿತ್ರಗಳನ್ನು ಆಯ್ಕೆ ಮಾಡಿದ್ದ ನನಗೂ, ಅದನ್ನು ಡಿಸೈನ್ ಮಾಡಿದ್ದ ಬಳಗದ ಜ್ಞಾನ ಪ್ರಕಾಶ್‍ರವರಿಗೆ ಸಹಜವಾಗಿಯೇ ಖುಷಿಯಾಯಿತು. ಯೇಸು ಕ್ರಿಸ್ತನ ಜೀವನದ  ಕೊನೆಯ ಕೆಲವು ಘಂಟೆಗಳ ಕಾಲದ ಘಟನೆಗಳ ಬಗ್ಗೆ ಅವರಿಗೆ ಒಂದು ವಿಶೇಷವಾದ ಭಾವವಿತ್ತು ಎಂಬುದು ಅವರ ಮಾತಿನಲ್ಲಿ ನಮಗೆ ತಿಳಿಯಿತು.

ಕ್ರಿಸ್ತನ ಕೊನೆಯ ಕೆಲವು ಘಂಟೆಗಳು ನಿಜಕ್ಕೂ ಮನಕಲಕುವಂಥದ್ದು. ತಮ್ಮ ಬಹಿರಂಗ ಜೀವನದ ಮೂರು ವರ್ಷಗಳಲ್ಲಿ ಯೇಸು ಅನೇಕ ರೀತಿಯ ವಿರೋಧಗಳನ್ನು ಎದುರಿಸುತ್ತಾರೆ.ಆದರೂ ಸಾವಿನ ಭಯವಿಲ್ಲದೆ ಮುನ್ನುಗ್ಗುತ್ತಾರೆ.  ಆದರೆ ಬಂಧನದ ನಂತರ ಯೇಸುವನ್ನು ಅತ್ಯಂತ ಹೀನವಾಗಿ ನಡೆಸಿಕೊಳ್ಳಲಾಗುತ್ತದೆ. ಒಬ್ಬ  ಮನುಷ್ಯನಿಗೆ  ನೀಡಬಹುದಾದ ಅತ್ಯಂತ ಹೇಯ ಮಾನಸಿಕ ಹಾಗೂ ದೈಹಿಕ ಹಿಂಸೆಯನ್ನು ಯೇಸು ಅನುಭವಿಸುತ್ತಾರೆ. ಯೇಸುವಿನ ಆ ಪರಿಸ್ಥಿತಿಯನ್ನು ಕಂಡು ಮರುಗುವ ಹಿನ್ನಲೆಯ ಗೀತೆ ’ನನ್ನ ಸ್ವಾರ್ಥ ಮನಸ್ಸಿನ ಈ ಬದುಕು.’

ಹಾಡಿನ ಪಲ್ಲವಿ ಹಾಗೂ ಮೊದಲ ಚರಣ ಕೇಳಿದಾಗಲ್ಲೆಲ್ಲ ನನಗೆ ಪೇತ್ರನ ಚಿತ್ರವೇ ನೆನಪಿಗೆ ಬರುತ್ತದೆ. ಶಿಷ್ಯರ ಕಾಲುಗಳನ್ನು ಯೇಸು ತೊಳೆಯಲು ಬಂದಾಗ, ಮೊದಲ ಪ್ರತಿರೋಧ ಬರುವುದೇ ಪೇತ್ರನಿಂದ. ’ಗುರುವಾಗಿರುವ ನೀವು ನಮ್ಮ ಪಾದ ತೊಳೆಯುವುದೇ’ ಎನ್ನುವ ಪೇತ್ರನ ಭಾವ ಈ ಹಾಡಿನಲ್ಲಿ ಕಾಣಿಸುತ್ತದೆ. ಹಾಗೆ ನೋಡಿದರೆ, ಶಿಷ್ಯರೆಲ್ಲಾ ದಿಕ್ಕಾಪಾಲಾಗಿ ಓಡಿಹೋದ ಮೇಲೆ ಪೇತ್ರ ಮಾತ್ರ ಯೇಸುವನ್ನು ಹಿಂಬಾಲಿಸುತ್ತಾನೆ. ಅದಕ್ಕೂ ಮುಂಚೆ ಗೆತ್ಸೆಮನಿಯಲ್ಲಿ ಸೈನಿಕರಿಗೆ ತಡೆಒಡ್ಡಿ ಒಬ್ಬನ ಕಿವಿ ಕತ್ತರಿಸುತ್ತಾನೆ. ಮುಂದೆ ಯೇಸುವನ್ನು ಮೂರು ಬಾರಿ ನಿರಾಕರಿಸುತ್ತಾನೆ, ಹಾಗೆಂದ ಮರುಕ್ಷಣವೇ  ಪಶ್ಚಾತ್ತಾಪದಿಂದ ಒದ್ದಾಡುತ್ತಾನೆ. 

ಈ ಹಿನ್ನಲೆಯಲ್ಲಿ ’ನನ್ನ ಸ್ವಾರ್ಥ ಮನಸ್ಸಿನ ಈ ಬದುಕು’ ಎಂಬ ಸಾಲುಗಳು ಪೇತ್ರನ ಪಶ್ಚಾತ್ತಾಪದ ಸ್ವಗತವೇನೋ ಎಂದು ಹಾಡು ಕೇಳಿದಾಗಲೆಲ್ಲಾಅನಿಸುತ್ತದೆ. ಪೇತ್ರನೊಂದಿಗೆ ಸೇರಿ ನಾವೆಲ್ಲಾ ಹಾಡಿದಂತೆ.  ’ಪ್ರಭುವೇ ನನ್ನ ಓ ಪ್ರಭುವೇ ಏಕೆ ನಿಮ್ಮ ಸೇವೆ’ ಎಂಬ ಸಾಲುಗಳು ಪೇತ್ರನ ಪಾದ ತೊಳೆಯುವಿಕೆಯ ಸಂದರ್ಭದ ಮಾತುಗಳನ್ನು ನೆನಪಿಸುತ್ತದೆ.
ಹಾರೋಬೆಲೆಯ ಮಹಿಮೆ ಹಾಗೂ ಪಳ್ಳಿಪಟ್ಟಿಯಲ್ಲಿನ ಮಹಿಮೆ ನಾಟಕದಲ್ಲಿ ಪೇತ್ರ ಯೇಸುವನ್ನು ನಿರಾಕರಿಸಿದ ನಂತರ ದೀರ್ಘವಾದ ದು:ಖಮಯ ಸನ್ನಿವೇಶವಿದೆ, ಹಾಡಿದೆ. ಇಲ್ಲಿ ಈ ಹಾಡಿನಲ್ಲಿ ಪೇತ್ರನಲ್ಲದಿದ್ದರೂ , ಆ ರೀತಿಯ ಭಾವ ಅಡಕವಾಗಿದೆ.

ಇಂದಿಗೂ ಈ ಹಾಡು ಕೇಳಿದಾಗಲೆಲ್ಲಾ ಒಂದು ವಿಷಾದ ಭಾವ ಆವರಿಸಿಕೊಳ್ಳುತ್ತದೆ. ಅದು ಪಶ್ಚಾತ್ತಾಪದ ಸುಳಿ ಮಿಂಚನ್ನು ಹರಿಸುತ್ತದೆ. ನಮ್ಮ ಸ್ವಾರ್ಥದ ಮನಸ್ಸು ಇಂದಿಗೂ ಯೇಸುವನ್ನು ಇಂಚು ಇಂಚಾಗಿ ಕೊಲ್ಲುತ್ತಿದೆ ಎಂಬ ಭಾವ ನಿಲ್ಲುತ್ತದೆ.  ಒಂದೇ ಸಾರಿ ಕೊಂದು ಬಿಡುವುದಕ್ಕಿಂತ ಕೊಲ್ಲುತ್ತಲೇ ಇರುವುದು ದೊಡ್ಡ ಹಿಂಸೆ, ಆದರಿಂದಲೇ ’ಕೊಲ್ಲುತ್ತಿದೆ’ ಎಂಬ ಇನ್ನೂ ವರ್ತಮಾನದ ಸಂಗತಿ ನಮ್ಮನು ಎಚ್ಚರಿಸುತ್ತಲೇ ಇರುತ್ತದೆ. ಸಾಯುತ್ತಿರುವ ವ್ಯಕ್ತಿಯ ಬಳಿ ’ಕ್ಷಮಿಸು  ಹಾಗೂ ’ಪರ ಸೇವೆ ಮಾಡಲು ಕಲಿಸು’  ಎನ್ನುವ ಪ್ರಾರ್ಥನೆಯೂ ಇಲ್ಲಿದೆ.

ಧಾರ್ಮಿಕ ಗೀತೆಗಳಿಗೆ ತೀರ ಭಿನ್ನವೆನಿಸುವ ವಾದ್ಯ ಸಂಯೋಜನೆ  ಹಾಡಿಗೆ ಒದಗಿ ಬಂದಿದೆ. ಕ್ರಿಸ್ತನ ಯಾತನೆಯನ್ನು ಕಣ್ಣಿನ ಮುಂದೆ ತರುವಲ್ಲಿ ಹಿನ್ನಲೆ ಸಂಗೀತ ಯಶಸ್ವಿಯಾಗಿದೆ. ಯೇಸುವಿನ ಭಾರವಾದ ಹೆಜ್ಜೆಗಳ ಪ್ರತೀಕವೋ ಎಂಬಂತೆ ತಾಳ ವಾದ್ಯಗಳು ಆಳವಾಗಿ, ಪರಿಣಾಮಕ್ಕಾರಿಯಾಗಿದೆ. ಇದಕ್ಕೆ ಕಳಶವಿಟ್ಟಂತ್ತಿರುವುದು ರಾಜೇಶ್ ಕೃಷ್ಣನ್‍ನವರ ಗಾಯನ.
 ’ನನ್ನೇಸು ಪ್ರಭುವನ್ನು ಕೊಲ್ಲುತ್ತಿದೆ’ ಎಂಬ ಸಾಲುಗಳು ಮನಸಾಕ್ಷಿಯ ಧ್ವನಿಯಂತೆ, ’ಪ್ರಭುವೇ ನನ್ನ ಕ್ಷಮಿಸು’ ಎನ್ನುವ ಸಾಲುಗಳು ಪಕ್ಕದ ಕಳ್ಳನ ಕ್ಷೀಣ ದನಿಯಂತೆ, ’ಏಕೆ ನಿಮ್ಮ ಸೇವೆ’ ಎಂಬುದು ಪೇತ್ರನ ಅಳುವಂತೆ, ’ಗುರುವು ನೀವು ದಾಸರು ನಾವು’ ಎಂಬುದು ಶಿಷ್ಯರ ಒಕ್ಕೊರಲಿನ ಮಾತಂತೆ, ’ಸ್ವಾರ್ಥ ತೊರೆದು ನೀ ಬಾಳು’ ಎಂಬುದು ನಮ್ಮದೇ ಅಂತರಾಳದಂತೆ, ಹೀಗೆ ವಿವಿಧ ಪಾತ್ರಗಳ ಭಾವ  ಹಾಡಿನಲ್ಲಿ ಕೇಳಿಸುವುದರಲ್ಲಿ ರಾಜೇಶರ ದನಿ ಮೋಡಿ ಮಾಡುತ್ತದೆ. ಆಗಿನ್ನೂ ವೃತ್ತಿನಿರತ ಗಾಯನಕ್ಕೆ ಕಾಲಿಡುತ್ತಿದ್ದ ರಾಜೇಶ್‍ರವರ ಕಂಠದಲ್ಲಿನ ಪಕ್ವತೆ ಎದ್ದು ಕಾಣುತ್ತದೆ.

ಹಾಡು ಮುಗಿದರೂ, ಆರಂಭದಲ್ಲಿನ  ಗಾಯಕಿಯ ಆಲಾಪನೆ ಮನದಲ್ಲಿ ಗುನುಗುಟ್ಟುತ್ತಾ ಸಾಗುತ್ತದೆ. ಹಾಡುಗಳು ಅಮರವಾಗುವುದೇ ಹೀಗೆ.


Saturday, October 29, 2016

ಫಾ.ಚಸರಾ ಸಂಗೀತ ಸಾಹಿತ್ಯ ಹೊದಗಿಸಿದ ಧ್ವನಿಸುರಳಿಗಳು

  • ಸ್ಪಂದನ
  • ಸ್ಪೂರ್ತಿ
  • ಸ್ಪರ್ಶಿತ
  • ಸೃರ್ತಿ
  • ಸಂವೇದ್ಯ
  • ಸಂಸೃಷ್ಟಿ
  • ಸಂಯೋಗ
  • ಸಂಮಿಶ್ರ
  • ಸಂಭಾವ್ಯ
  • ಸ್ಥಾಯಿ
  • ಸುಪ್ತ
  • ಸಿಟ್ಟಾಗಬ್ಯಾಡ
  • ಹನಿ
  • ಸಾಕ್ಷಿ
  • ಸಾಂಗತ್ಯ
  • ಸಂಕುಲ
  • ಕೃತಾರ್ಥ





ಚಸರಾ ಪುಸ್ತಕಗಳ ಪಟ್ಟಿ

  • ಖಲೀಲ್ ಗಿಬ್ರಾನ್ ನ ಜೀಸಸ್
  • ಆಂತರ್ಯ ೧
  • ಆಂತರ್ಯ ೨
  • ಆಂತರ್ಯ ೩
  • ಜೊತೆ ಜೊತೆಯಲ್ಲಿ
  • ಕನಸಿರಲಿ ಕೊನೆವರೆಗೆ
  • ಶತ್ರುಮಿತ್ರರ ನಡುವೆ ಹಾಯಿ ದೋಣಿ
  • ನಮ್ಮ ಎದೆಯೊಳಗಿನ ಹಣತೆ
  • ಸೃತಿ ಶಿಲ್ಪಿ ಫಾ.ಅಂತಪ್ಪ
  • ಮತಾಂತರ
  • ಚೇತನ - ೬ ಆವೃತ್ತಿಗಳು
  • ಸಂಸ್ಕಾರ ವಿಧಿಗಳು ಮತ್ತು ಆಶೀರ್ವಚನ
  • ಸಾಮತಿ ಎಂಬ ಕಥಾಲೋಕ
  • ಕ್ರಿಸ್ತನ ಕೊನೆ ದಿನ
  • ಕ್ರಿಸ್ತನೊಳಗಿನ ಕ್ರಿಸ್ತ
  • ಅದುಮಿಟ್ಟ ನೆನಪಿನ ಪುಟಗಳಿಂದ
  • ಇಕ್ಕಟ್ಟಿಗೆ ಸಿಲುಕಿಸಿಬಿಟ್ಟೆ ಕ್ರಿಸ್ತ












Tuesday, October 11, 2016

ನನ್ನ ಮೆಚ್ಚಿನ ಫಾ.ಚಸರಾ ಹಾಡುಗಳು - ಭಾಗ 3 - ’ನನ್ನ ತಂದೆಯ ಈ ಆಲಯ’

ಕಳೆದ ಸಂಚಿಕೆಯಲ್ಲಿ ’ಸ್ಫೂರ್ತಿಯಾಗಲಿ ಕ್ರಿಸ್ತ’ ಬಗೆಗಿನ ಬರಹವನ್ನು ಓದಿದ ಒಂದಿಬ್ಬರು ಯುವಮಿತ್ರರು ಬರಹ ಇನ್ನಷ್ಟು ಸರಳವಾಗಿದ್ದರೆ ಓದಲು, ಅರ್ಥ ಮಾಡಿಕೊಳ್ಳಲು ಸುಲಭವಾಗಿರುತ್ತದೆ, ಓದಿಸಿಕೊಂಡು ಹೋಗುತ್ತದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು. ಮುಗಳ್ನಕ್ಕು ಸುಮ್ಮನಾದೆ. ಆ ಹಾಡಿನ ಪ್ರತಿ ಸಾಲಿನ ಬಗ್ಗೆ ವಿವರವಾಗಿ ಬರೆದ ಕಾರಣಕ್ಕೆ ಹಾಗೆನಿಸಿತೇನೋ. ಆದರೆ ಎಲ್ಲಾ ಹಾಡುಗಳ ಬಗ್ಗೆ ಅಷ್ಟು ದೀರ್ಘವಾಗಿ, ವಿವರವಾಗಿ ಬರೆಯಲು ಸಾಧ್ಯವಾಗುವುದಿಲ್ಲ. ’ಸ್ಪೂರ್ತಿಯಾಗಲಿ ಕ್ರಿಸ್ತ’ ನಿಜಕ್ಕೂ ಒಂದು ಅಪರೂಪದ ಗೀತೆ ಹಾಗೂ ವಿವರವಾದ ಬರಹಕ್ಕೆ ಯೋಗ್ಯವಾದಂತ ಗೀತೆ. ನಿಧಾನವಾಗಿ ಓದಿದಾಗ ಮುಂದೆ ಎಂದಾದರೂ ಆ ಲೇಖನ ಆ ಗೆಳೆಯರಿಗೆ  ಇಷ್ಟವಾಗಬಹುದೇನೋ.

ಇಷ್ಟೆಲ್ಲಾ ಪೀಠಿಕೆ ಏಕೆಂದರೆ ಈ ಭಾಗದಲ್ಲಿ ನಾನು ಬರೆಯಲು ಆರಿಸಿಕೊಂಡ ಚಸರಾರವರ ಮುಂದಿನ ಗೀತೆ ’ನನ್ನ ತಂದೆಯ ಈ ಆಲಯ’. ಕಾಕತಾಳೀಯವೆಂಬಂತೆ ಚಸರಾರವರ ಗೀತೆಗಳಲ್ಲಿ ಸಾಹಿತ್ಯಿಕವಾಗಿ, ಸಂಗೀತದ ದೃಷ್ಠಿಯಿಂದ ಅತ್ಯಂತ ಸರಳವಾದ ಗೀತೆ ಇದು ಎಂದೇ ಹೇಳಬಹುದು.  ಸರಳವಾದರೂ ನನ್ನ ಅತ್ಯಂತ ಇಷ್ಟವಾದ ಗೀತೆಗಳಲ್ಲಿ ಇದೂ ಒಂದು. ಏಕೆ ಇಷ್ಟ ಎಂದು ಹೇಳಲು ಕಷ್ಟವಾದರೂ, ಪ್ರಾಯಶ: ಈ ಗೀತೆಗೆ ಇರುವ ಹಿನ್ನಲೆ, ಗೀತೆಯನ್ನು ಕೇಳಿದ ಮೊದಲ ಸಂದರ್ಭ, ಗೀತೆಗೆ ಅಂಟಿಕೊಂಡಿರುವ ದೃಶ್ಯ ಸ್ವರೂಪವೆಲ್ಲವೂ ಇದಕ್ಕೆ ಕಾರಣವೇನೋ.

’ನನ್ನ ತಂದೆಯ ಈ ಆಲಯ’ ಗೀತೆಯನ್ನು ನಾ ಮೊದಲು ಕೇಳಿದ್ದು 1995ರಲ್ಲಿ, ಮರಿಯಾಪುರದ ಮಹಿಮೆಯ ಮೊದಲ ಪ್ರದರ್ಶನದಲ್ಲಿ. ಆ ಮೊದಲ ಪ್ರದರ್ಶನದಲ್ಲಿನ ಬೆಳಕು, ರಂಗ ಸಜ್ಜಿಕೆ, ಧ್ವನಿ ವ್ಯವಸ್ಥೆ, ಜನ ಸಾಗರ ಎಲ್ಲವನ್ನೂ ನೋಡಿ ಮೂಕವಿಸ್ಮಿತನಾಗಿ ಹೋಗಿದ್ದ ನಾನು, ಕನ್ನಡದಲ್ಲಿಯೂ ಇಂತಹ ಕಾರ್ಯಕ್ರಮ ಸಾಧ್ಯವಾಯಿತಲ್ಲ ಎಂಬ ಆಲೋಚನೆಯಿಂದ ರೋಮಾಂಚಿತನಾಗಿದ್ದೆ. ಕೇವಲ ಬೆಳಕು, ಥಳಕು, ಜಾತ್ರೆ ಮಾತ್ರವಲ್ಲದೆ ಅಂದು ನನ್ನನ್ನು ಸೆಳೆದದ್ದು ಮಹಿಮೆ ನಾಟಕದ ಅದ್ಭುತವೆನಿಸುವಂತ ಸಾಹಿತ್ಯ, ಸಂಗೀತ ಹಾಗೂ ಹಿನ್ನಲೆ ಸಂಗೀತ. ಮಹಿಮೆಯ ಮೂಲ ಆವೃತ್ತಿ ಏನಿತ್ತೋ ಅದು ಇಂದಿಗೂ world class. ಈ ಮಹಿಮೆಯ ಹಾಡುಗಳನ್ನೊಳಗೊಂಡ ಧ್ವನಿಸುರಳಿಯೇ ’ಸಂವೇದ್ಯ’.

ಕಳೆದ ಸಂಚಿಕೆಯಲ್ಲಿ ನಾವು ಚರ್ಚಿಸಿದ ’ಸ್ಪೂರ್ತಿ’ ಧ್ವನಿಸುರಳಿ ಕನ್ನಡ ಕ್ರೈಸ್ತ ಸಂಗೀತದ ಅತ್ಯುತ್ತಮ ಧ್ವನಿಸುರಳಿಗಳಲ್ಲಿ ಒಂದಾದರೆ, ’ಸಂವೇದ್ಯ’ ಒಂದು ಮಹತ್ವದ ಧ್ವನಿಸುರಳಿ ಎಂದರೆ ತಪ್ಪಾಗಲಾರದು. ’ಸ್ಪೂರ್ತಿ’ ಕನ್ನಡ ಭಕ್ತಿಗೀತೆಗಳ ಒಂದು ಸಿದ್ಧ ಸೂತ್ರಕ್ಕಿಂತ ಭಿನ್ನವಾದ ಸೃಜನಾಶೀಲತೆಯನ್ನು ಒಳಗೊಂಡಿದ್ದರೆ, ’ಸಂವೇದ್ಯ’ ದ ಗೀತೆಗಳು ಇಡೀ ಬೈಬಲ್ ನ ಸಾರವನ್ನು ವಿಶಿಷ್ಠ ರೀತಿಯಲ್ಲಿ ಅಭಿವ್ಯಕ್ತಿಗೊಳಿಸಿದ ಕೃತಿ. ಬೈಬಲ್ ಆಧಾರಿತ ಮಹಿಮೆ ನಾಟಕದ ಹಾಡುಗಳು ಎಂದಾಕ್ಷಣ ಒಂದು ರೀತಿಯ ಚೌಕಟ್ಟಿನಲ್ಲಿ ಹಾಡುಗಳನ್ನು ರಚಿಸುವ, ಸಾಹಿತ್ಯವನ್ನು ಮಿತಿಗೊಳಿಸುವ ಅನಿವಾರ್ಯತೆ, ಸೀಮಿತ ಅವಕಾಶ ತಾನಾಗಿಯೇ ಏರ್ಪಡುತ್ತದೆ.  ಆದರೆ ಬೈಬಲ್ ನ ನಾವು ನೀವು ಕೇಳಿದ, ಓದಿದ ಘಟನೆಗಳಿಗೆ ಹೇಗೆ ಹೊಸ ಸ್ಪರ್ಶವನ್ನು ನೀಡಬಹುದು ಎಂಬುದಕ್ಕೆ ’ಸಂವೇದ್ಯ’ದ ಗೀತೆಗಳು ಸಾಕ್ಷಿಯಾಗಿದೆ.

ಯೇಸು ಜೆರುಸಲೇಮ ನಗರದ ಮಹಾದೇವಾಲಯದಲ್ಲಿನ ವರ್ತಕರನ್ನು ಅಲ್ಲಿಂದ ಓಡಿಸುವ ಸಂದರ್ಭದಲ್ಲಿ ’ನನ್ನ ತಂದೆಯ’ ಹಾಡು ಬರುತ್ತದೆ. ’ಸಂವೇದ್ಯ’ ಆರಂಭಿಕ ನಿರೂಪಣೆಯ ಬಗ್ಗೆ ಮತ್ತೆ ಒಂದೆರೆಡು ಮಾತು. ಫಾ.ಚಸರಾರವರ ಧ್ವನಿಯಲ್ಲಿಯೇ ಇರುವ ಈ ನಿರೂಪಣೆಯ ಆರಂಭದಲ್ಲಿ ಸುಂದರವಾದ ಸಾಲುಗಳು ಈ ರೀತಿಯಲ್ಲಿವೆ -
"ಬಿರುಗಾಳಿಯ ಅಬ್ಬರ ತಂಗಾಳಿಗಿಲ್ಲ, ಆದರೆ ಮಾಧುರ್ಯತೆ ಮಿನುಗುವುದೇ ಈ ಮಂದಹಾಸದ ಮೆಲ್ಲುಡಿಯಲ್ಲಿ
ಎಲ್ಲಿಂದಲೋ ಬಂದು ಅಂತರಾಳದ ಭಾವನೆಗಳನ್ನು ನವಿರಾಗಿ ತಟ್ಟಿ ತಂಪಾಗಿಸುವ ಈ ಸಂವೇದನೆ ಸೃಷ್ಟಿಯ ಶ್ರೇಷ್ಠತೆಯಷ್ಟೇ ಸೌಮ್ಯ"

ಒಂದು ತಂಗಾಳಿ ಎಷ್ಟು ನವಿರಾಗಿ ನಮ್ಮನ್ನು ತಟ್ಟಬಲ್ಲದು ಎಂಬುದರ ವರ್ಣನೆ ಇಲ್ಲಿದೆ. ಇದಕ್ಕೆ ಇನ್ನಷ್ಟು ವಿವರಣೆ ಬೇಡ. ’ನನ್ನ ತಂದೆಯ ಹಾಡು ಕೇಳಿದಾಗಲೆಲ್ಲಾಈ ಮೇಲಿನ ನಿರೂಪಣೆಯ ಸಾಲುಗಳು ನೆನಪಿಗೆ ಬರುತ್ತದೆ. ಅನೇಕ ವೈವಿಧ್ಯಮಯ, ಸಂಗೀತ ಪ್ರಧಾನ, ಸಾಹಿತ್ಯ ಪೂರ್ಣ, ಭಾವಪೂರ್ಣ ಹಾಡುಗಳ ನಡುವೆಯೂ ಅತ್ಯಂತ ಸರಳ ಗೀತೆಗಳಿಗೆ ತಮ್ಮದೇ ಆದ ನವಿರಾದ ಸೌಂದರ್ಯವಿದೆ.  ಅಂತಹ ಹಾಡುಗಳಲ್ಲಿ ’ನನ್ನ ತಂದೆಯ’ ಒಂದು. ಒಂದು ಮಂದಹಾಸದ ಮೆಲ್ಲುಡಿಯಂಥ ಸ್ವಭಾವ ಈ ಹಾಡಿಗಿದೆ. ಸರಳ ವಾದ್ಯ ಸಂಯೋಜನೆಯಿಂದಾಗಿ ಇಲ್ಲಿ ಮಾಧುರ್ಯ ಮಿನುಗುತ್ತದೆ. ಇಡೀ ಹಾಡು ತನ್ನ ಸೌಮ್ಯತೆಯಿಂದ ನಮ್ಮ ಅಂತರಾಳದ ಭಾವನೆಗಳನ್ನು ತಟ್ಟುತ್ತದೆ. ಸಂವೇದ್ಯ ಧ್ವನಿಸುರಳಿಯನ್ನು ಗಮನವಿಟ್ಟು ಕೇಳಿದಾಗ , ಅಲ್ಲಿನ ಇನ್ನಿತರ ಹಾಡುಗಳಿಗಿರುವಷ್ಟು prelude, ಅಂದರೆ ಗಾಯನಕ್ಕಿಂತ ಮುಂಚೆ ಬರುವ ವಾದ್ಯ ಹಿನ್ನಲೆ ಸಂಗೀತ ಇಲ್ಲಿ ಬಹಳ ಚಿಕ್ಕದಾಗಿದೆ. ಮೊದಲ ಐದು ಸೆಂಕೆಂಡ್ ಗಳಲ್ಲಿಯೇ ಗಾಯನ ಪ್ರಾರಂಭವಾಗುತ್ತದೆ. ಯಾವುದೇ ಮುನ್ಸೂಚನೆ ಇಲ್ಲದೆ ಪ್ರಾರಂಭ ವಾಗುವ ಈ ಹಾಡು ’ ಎಲ್ಲಿಂದಲೋ ಬಂದು ಅಂತರಾಳದ ಭಾವನೆಗಳನ್ನು...’ ಎಂಬ ನಿರೂಪಣೆಯ ಮೇಲಿನ ಸಾಲುಗಳನ್ನು ನೆನಪಿಸುತ್ತದೆ.

ಮತ್ತಾಯನ ಶುಭ ಸಂದೇಶದ 21: 12-14ರಲ್ಲಿ ಬರುವ ಜೆರುಸಲೇಮ ಮಹಾದೇವಾಲಯದಲ್ಲಿನ ಘಟನೆಯ ಹಿನ್ನಲೆ ಈ ಹಾಡಿಗಿದೆ. ವ್ಯಾಪಾರ ಹಾಗೂ ಹಣ ವಿನಿಮಯಯದ ತಾಣವಾಗಿ ಮಾರ್ಪಟ್ಟ ಮಹಾದೇವಾಲಯವನ್ನು ಕಂಡು ಯೇಸು ಅಕ್ರೋಶಗೊಳ್ಳುತ್ತಾರೆ, ಮರಗುತ್ತಾರೆ ಹಾಗೂ ತಾವೇ ಅವರನ್ನು ಓಡಿಸುತ್ತಾರೆ. ಕೊನೆಯಲ್ಲಿ ತಮ್ಮತನಕ್ಕೆ ಮರಳುತ್ತಾರೆ. ಬೈಬಲ್ ಪಂಡಿತರು ಈ ಘಟನೆಯ ಬಗ್ಗೆ ಸುವಿಸ್ತಾರವಾಗಿ ಬರೆದಿದ್ದಾರೆ. ಆಗ ಮಹಾದೇವಾಲಯಕ್ಕೆ ಬರುತ್ತಿದ್ದವರು ಬಲಿ ಅರ್ಪಣೆಯನ್ನು ಅನೇಕ ಕಾರಣಗಳಿಂದ ಮಾಡಬೇಕಾಗುತಿತ್ತು. ಅದಕ್ಕಾಗಿ ಪ್ರಾಣಿ ಪಕ್ಷಿಗಳ ಮಾರಾಟ ಮಹಾದೇವಾಲಯದ ಒಳಗೂ, ಹೊರಗೂ ಬಹಳ ಜೋರಾಗಿಯೇ ನಡೆಯುತ್ತಿತ್ತು.  ಈ ಮಾರಾಟ ಮಹಾದೇವಾಲಯದ ಹೊರಗಡೆಯಲ್ಲಿಯೂ ನಡೆಯುತ್ತಿದ್ದರೂ, ದೇವಾಲಯದಲ್ಲಿ ಮಾರಾಟವಾಗುತ್ತಿದ್ದ ಬಲಿ ಅರ್ಪಣೆಯ ಪ್ರಾಣಿ ಪಕ್ಷಿಗಳು ಶ್ರೇಷ್ಠ ಎಂಬ ಭಾವನೆಯನ್ನು ದೇವಾಲಯದ ಯಾಜಕರೇ ತೇಲಿಬಿಟ್ಟಿದ್ದರು. ಏಕೆಂದರೆ ದೇವಾಲಯದ ಒಳಗಡೆಯ ವ್ಯಾಪಾರದಲ್ಲಿ ಅವರದೂ ಪಾಲುದಾರಿಕೆ ಇರುತಿತ್ತು. ಮಹಾದೇವಾಲಯದಲ್ಲಿನ ಈ  ಬಲಿ ಅರ್ಪಣೆಯ ಪ್ರಾಣಿ ಪಕ್ಷಿಗಳ ಬೆಲೆ ಹೊರಗಡೆಯದಕ್ಕಿಂತ ಎಷ್ಟೋ ಪಟ್ಟು ಹೆಚ್ಚಾಗಿದ್ದರೂ ಜನ ಅಲ್ಲಿಯೇ ದುಬಾರಿ ಬೆಲೆಯಲ್ಲಿ ಕೊಂಡುಕೊಳ್ಳುವ ಅನಿವಾರ್ಯತೆ ಸೃಷ್ಟಿಯಾಗಿತ್ತು. ಇದೊಂದು ರೀತಿಯ ಶೋಷಣೆ, ದಬ್ಬಾಳಿಕೆ.

ಹಾಗೆಯೇ ಮಹಾದೇವಾಲಯಕ್ಕೆ ಜನ ದೂರ ದೂರದ ದೇಶಗಳಿಂದ ಬರುತ್ತಿದ್ದರು. ಸಹಜವಾಗಿಯೇ ಹಣ, ನಾಣ್ಯಗಳು ಬೇರೆಯದಾಗಿರುತ್ತಿತ್ತು. ಈ ಹಣವನ್ನು ಸ್ಥಳೀಯ ಹಣವಾಗಿ ಪರಿವರ್ತಿಸುವ ವಿನಿಮಯ ಕೇಂದ್ರವೂ ಮಹಾದೇವಲಯದಲ್ಲೇ ಇದ್ದೂ ಅದು ಕೂಡ ಸಾಮಾನ್ಯಕ್ಕಿಂತ  ಹೆಚ್ಚಿನ ವಿನಿಮಯ ಶುಲ್ಕವನ್ನು ದೇವಾಲಯದ ಅಭಿವೃದ್ಧಿ ಹೆಸರಿನಲ್ಲಿ ವಸೂಲಿ ಮಾಡುತ್ತಿತ್ತು. ಇದೂ ಕೂಡ ಒಂದು ರೀತಿಯ ಹಗಲು ದರೋಡೆಯೇ. ಇದರಿಂದ ಶೋಷಿತರಾಗುತ್ತಿದ್ದವರು  ಬಡವರು ಹಾಗೂ ದೂರದ ಅಮಾಯಕ ಜನರು. ಯೇಸು ಈ ಶೋಷಣೆ, ದಬ್ಬಾಳಿಕೆಯ ವಿರೋಧಿಯಾಗಿದ್ದರು. ಬಡವರ ಪರವಾದ ಕಾಳಜಿ ಅವರಲ್ಲಿತ್ತು. ಮಹಾದೇವಾಲಯಕ್ಕೆ ಬಂದಾಗ, ಅಲ್ಲಿನ ವ್ಯಾಪಾರ, ಅನಾಚಾರ  ಅವರ ಅಕ್ರೋಶಕ್ಕೆ ಕಾರಣವಾಯಿತು.

ಜೆರಸಲೇಮಿನಲ್ಲಿ ಯೇಸುವಿನ ಬಗ್ಗೆ ಯಾಜಕವರ್ಗಕ್ಕೆ ಸಿಟ್ಟು, ಮತ್ಸರವಿದ್ದೂ ಅವರ ವಿರುದ್ಧ ಕುತಂತ್ರ ನಡೆಯುತ್ತಿದ್ದರೂ, ಯೇಸು ಜೆರುಸಲೇಮ್ ನಗರವನ್ನು, ಮಹಾದೇವಾಲಯವನ್ನು ಅಪಾರವಾಗಿ ಪ್ರೀತಿಸುತ್ತಿದ್ದದ್ದನ್ನು, ಆ ನಗರದ ಮುಂದಿನ ದುರ್ಗತಿಗಾಗಿ ದು:ಖಗೊಂಡಿದ್ದನು ನಾವು ಶುಭಸಂದೇಶದಲ್ಲಿ ಕಾಣಬಹುದು. ಆದರಿಂದಲೇ ಮಹಾದೇವಾಲಯದ ಪಾವಿತ್ರತೆ, ಶಾಂತತೆ ಹಾಗೂ ಇತಿಹಾಸ, ಹಾಗೂ ಪ್ರಾರ್ಥನೆಯ ವಾತಾವರಣಕ್ಕೆ ಧಕ್ಕೆ, ಭಂಗ ಬಂದಾಗ ಅವರು ಕೋಪಗೊಳ್ಳುತ್ತಾರೆ. ಯೆರೆಮೀಯಾ ಪ್ರವಾದಿಯ  7:11 ಮಾತುಗಳನ್ನು,  ಯೆಶಾಯ ಪ್ರವಾದಿಯ 56:7ರ ಮಾತುಗಳನ್ನು ಇಲ್ಲಿ ಉಲ್ಲೇಖಿಸುತ್ತಾ ವರ್ತಕರನ್ನು, ವ್ಯಾಪಾರಿಗಳನ್ನು ಓಡಿಸುತ್ತಾರೆ. ಕೊನೆಗೆ ತಮ್ಮ ಬಳಿಗೆ ಬಂದ ಕುಂಟರು, ಕುರುಡರನ್ನು ಸ್ವಸ್ಥಪಡಿಸುತ್ತಾರೆ ಎಂಬ ಮಾತು ಶುಭಸಂದೇಶದಲ್ಲಿದೆ. 

ಈ ಹಿನ್ನಲೆಯಲ್ಲಿ ಈ ಹಾಡನ್ನು ಕೇಳಿದಾಗ ಈ ಇಡೀ ಘಟನೆಯ ಸಾರವನ್ನು ಹಾಡು ಅದ್ಭುತವಾಗಿ ಹಿಡಿದಿಡುವಲ್ಲಿ ಯಶಸ್ವಿಯಾಗಿದೆ ಎಂದು ನನಗನಿಸುತ್ತದೆ. ಯೇಸು ಕೋಪಗೊಂಡು, ನಂತರ  ಶಾಂತ ಚಿತ್ತರಾದ ಮೇಲಿನ ಶಾಂತ ವಾತಾವರಣದ ಸಂದರ್ಭದ ಸಂಕೇತವೋ ಎಂಬಂತೆ ಹಾಡು ಮಧುರವಾಗಿ ಆರಂಭಗೊಳ್ಳುತ್ತದೆ. ತಮ್ಮ ಕೋಪಕ್ಕೆ ಕಾರಣವೇನು, ಮಹಾದೇವಾಲಯದ ಪಾವಿತ್ರ್ಯತೆಯ ಮಹತ್ವವೇನು ಎಂಬುದನ್ನು ಸ್ವತ: ಯೇಸುವೇ ಹೇಳುವಂತೆ ಹಾಡು ಕೇಳಿಸುತ್ತದೆ.

 ’ಶುದ್ಧ ಮನಸ್ಸಿನ ಗುಡಿಯು ದೇವರ ಮಂದಿರವು’ ಎಂಬ ಸಾಲುಗಳು ಅನೇಕ ಅರ್ಥಗಳನ್ನು ನೀಡಬಲ್ಲದು. ದೇವರ ಗುಡಿ, ಮಂದಿರ ಎನ್ನುವುದು ಯಾವುದೇ ಗೊಂದಲವಿಲ್ಲದ ವಾತಾವರಣದಿಂದ ಕೂಡಿರಬೇಕೆಂಬ ಆಶಯ ಇಲ್ಲಿದೆ. ಅಂತೆಯೇ ನಮ್ಮ ಮನಸ್ಸುಗಳು ದೇವರ ಮಂದಿರವಾಗಬೇಕಾದರೆ ಅದು ಶುದ್ಧವಾಗಿರಬೇಕು ಹಾಗೂ ಎಲ್ಲಾ ರೀತಿಯ ಗೊಂದಲ, ಮೋಸ ವಂಚನೆಯ ಲೆಕ್ಕಚಾರಗಳಿಂದ ಮುಕ್ತವಾಗಿರಬೇಕೆಂಬ ಸಂದೇಶವೂ ಇಲ್ಲಿದೆ.  ದೇವಾಲಯವನ್ನು, ದೈವ ಕಾರ್ಯಗಳಿಗೆ  ಸಂಬಂಧಪಟ್ಟ ಅಧಿಕಾರವನ್ನು ದುರ್ಬಳಕೆ ಮಾಡಿಕೊಳ್ಳುವ  , ತಮ್ಮ ಮೋಸದ ಕಾರ್ಯಗಳನ್ನು ದೇವರ ಹೆಸರಿನಲ್ಲಿ ಮಾಡುವ ಗೋಮುಖವ್ಯಾಘ್ರಗಳನ್ನು ನಾವು ಕಾಣಬಹುದಾಗಿದೆ.  ದೇವಾಲಯವನ್ನು, ದೈವ ಅಧಿಕಾರವನ್ನು ಕಳ್ಳರ ಗುಹೆಯನ್ನಾಗಿ ಮಾಡಿಕೊಂಡ ಜನರು ಯೇಸುವಿನ ಕಾಲದಲ್ಲಿಯೂ, ಇಂದಿನ ಸಮಯದಲ್ಲೂ ಇರುವಾಗ , ಅದೆಲ್ಲವನ್ನು ತ್ಯಜಿಸಿ, ದೇವರ ಮಂದಿರವನ್ನು ಹೃದಯದ ಗುಡಿಯಾಗಿಸಿರಿ ಎಂಬ ಕರೆ ಈ ಹಾಡಿನಲ್ಲಿದೆ. 

ಕೇವಲ ಐದೇ ಸಾಲಿರುವ, 2.30 ನಿಮಿಷದೊಳಗೆ ಮುಗಿದು ಹೋಗುವ ಈ ಗೀತೆ, ಈ ಧ್ವನಿಸುರಳಿಯ ಅತ್ಯಂತ ಮಧುರ ಗೀತೆಗಳಲ್ಲಿ ಒಂದು ಎಂದರೆ ತಪ್ಪಾಗಲಾರದು. ಸಾಧು ಕೋಕಿಲರವರ ವಾದ್ಯ ಸಂಯೋಜನೆ ಈ ಸಾಹಿತ್ಯದ ಭಾವಕ್ಕೆ ಬೇಕಾದ ಮನಸ್ಥಿತಿ,mood ಅನ್ನು ಹಿಡಿದಿಟ್ಟಿದೆ. ಅದಕ್ಕಿಂತ ಮುಖ್ಯವಾಗಿ ಒಂದು ರೀತಿಯ ಮೌನ ಹಾಡಿನಲ್ಲಿ ನಡುವೆ ಇದ್ದಂತೆ ಭಾಸವಾಗುತ್ತದೆ. ಆ ಮೌನ ಇಣುಕಿರುವುದು ಕೆಲವೇ ಪದಗಳ ಸಾಹಿತ್ಯದಿಂದಾಗಿಯೋ ಅಥವಾ ಸಂಯಮದ ವಾದ್ಯ ಸಂಯೋಜನೆಯಿಂದಾಗಿಯೋ ಹೇಳುವುದು ಕಷ್ಟ.  ಗಾಯನವೂ ಅಷ್ಟೇ ಸುಂದರವಾಗಿ ಮೂಡಿಬಂದಿದೆ.  ಮಹಿಮೆ ನಾಟಕದಲ್ಲಿ ಸಹಾ ಯೇಸುವಿನ ಕೊನೆಯ ದಿನಗಳ ಮನಮುಟ್ಟುವ ದೃಶ್ಯಗಳಲ್ಲಿ ಈ ಹಾಡಿನ ದೃಶ್ಯವೂ ಒಂದು. ಅಂತೆಯೇ ಚಸರಾರವರ ಗೀತೆಗಳಲ್ಲಿ ’ನನ್ನ ತಂದೆಯ’ ನನ್ನ ಮೆಚ್ಚಿನ ಗೀತೆಗಳಲ್ಲಿ ಒಂದಾಗಿ ಉಳಿದುಕೊಂಡಿದೆ.  ಇಂದಿಗೂ ನಮ್ಮ ಅನೇಕ ದೇವಾಲಯಗಳಲ್ಲಿ ಪ್ರವೇಶ ಗೀತೆಯಾಗಿ ಈ  ಹಾಡನ್ನು ಹಾಡಲಾಗುತ್ತಿದ್ದು, ಹಾಡಿನ ನಿಜ ಅರ್ಥ ಇಂದಿಗೂ ಪ್ರಸ್ತುತವಾಗಿದೆ.

ಮುಂದೆ, ಇದೇ ಸಂವೇದ್ಯ ಧ್ವನಿಸುರಳಿಯ ಇನ್ನೊಂದೆರೆಡು ಹಾಡುಗಳ ಬಗ್ಗೆ ಬರೆಯಬೇಕಾಗಿದೆ. 

ನನ್ನ ಮೆಚ್ಚಿನ ಚಸರಾ ಗೀತೆಗಳು - ಭಾಗ 2 ಸ್ಪೂರ್ತಿಯಾಗಲಿ ಕ್ರಿಸ್ತ



ಫಾ.ಚಸರಾರವರ ಸ್ಪೂರ್ತಿಯಾಗಲಿ ಕ್ರಿಸ್ತದ ಬಗ್ಗೆ ಕಳೆದ ಸಂಚಿಕೆಯಲ್ಲಿ ಬರದು ಅದನ್ನು ಮುಂದುವರಿಸುವ ನಡುವೆ ಡಾ.ಜಿ.ಎಸ್.ಶಿವರುದ್ರಪ್ಪನವರ ’ಕಾವ್ಯಾರ್ಥ ಚಿಂತನ’ ಎಂಬ ಪುಸ್ತಕದ ಒಂದೆರೆಡು ಅಧ್ಯಾಯಗಳನ್ನು ಓದುವ ಅವಕಾಶ ಆಕಸ್ಮಿಕವಾಗಿ ಸಿಕ್ಕಿತು. ಒಬ್ಬ ಕವಿಯ ಕಾವ್ಯ ಕೃಷಿಯಲ್ಲಿ ಅಥವಾ ಒಂದು ಕಾವ್ಯ ಸೃಷ್ಟಿಯಲ್ಲಿ ಯಾವ ಯಾವ ಅಂಶಗಳು ಒಳಗೊಂಡಿರುತ್ತವೆ ಎಂಬುದರ ಬಗ್ಗೆ ಅಧ್ಯಯನಶೀಲವಾದ ಲೇಖನಗಳ ಸರಮಾಲೆ ಪುಸ್ತಕದಲ್ಲಿದೆ. ಜಿ.ಎಸ್.ಎಸ್ ಎಂದಿನಂತೆ ಅತ್ಯಂತ ಗಂಭೀರ ಹಾಗೂ ಆಳವಾದ ವಸ್ತುವನ್ನು ಅಪಾರವಾದ ಅಧ್ಯಯನದಿಂದ ಸರಳವಲ್ಲದಿದ್ದರೂ ಸುಲಲಿತವಾಗಿ ಬರೆದಿದ್ದಾರೆ. ಕಾವ್ಯ ಸೃಷ್ಟಿಯ ವಿವಿಧ ಮಜಲುಗಳಲ್ಲಿ ’ಪ್ರತಿಭೆ’ಯ ಬಗ್ಗೆ ಮೊದಲ ಅಧ್ಯಾಯವಿದ್ದರೆ, ಎರಡನೆಯ ಅಧ್ಯಾಯ ’ಸ್ಪೂರ್ತಿ’ಗೆ  ಮೀಸಲು.  ಕವಿಯೊಬ್ಬನಿಗೆ ಪ್ರತಿಭೆ ಹೇಗೆ ಮುಖ್ಯವೋ  ಹಾಗೆಯೇ ಆತ ಪಡೆಯುವ ಸ್ಪೂರ್ತಿ ಹಾಗೂ ಅದರ ಪ್ರಾಮುಖ್ಯತೆಯ ಬಗ್ಗೆ ಸುವಿಸ್ತಾರವಾಗಿ ಬರೆದಿದ್ದಾರೆ ಜಿ.ಎಸ್.ಎಸ್.

 ’ಸ್ಪೂರ್ತಿಯಾಗಲಿ ಕ್ರಿಸ್ತ’ ಗೀತೆಯನ್ನು ಒಬ್ಬ ಕಾವ್ಯ ವಿಮರ್ಶಕ ಕಾವ್ಯವೆಂದು ಪರಿಗಣಿಸಲಾರನೇನೋ, ಆದರೆ ಸಾಮಾನ್ಯ ಕೇಳುಗನಿಗೆ ಅದೊಂದು ಸುಂದರವಾದ ಕವಿತೆಯೇ. ಜಿ.ಎಸ್.ಎಸ್ ರವರ ಆ ಮೊದಲೆರೆಡು ಅಧ್ಯಾಗಳನ್ನು ಓದುತ್ತಾ ಹೋದಂತೆ, ಈ ಹಾಡಿನ ರಚನೆಯಲ್ಲಿ ಫಾ.ಚಸರಾರವರ ಪ್ರತಿಭೆಯ ಪಾಲೆಷ್ಟು, ಅವರ ಪಡೆದುಕೊಂಡ ಸ್ಪೂರ್ತಿಯ ಪಾಲೆಷ್ಟಿರಬಹುದು ಎಂಬ ಪ್ರಶ್ನೆ ಮನದಲ್ಲಿ ಮೂಡಿ ಬಂತು. ಫಾ ಚಸರಾ ಇದ್ದಿದ್ದರೆ ಕೇಳಬಹುದಿತ್ತೇನೋ? ಇದ್ದಾಗ ಕೇಳಿದ್ದರೂ ಹಾರಿಕೆಯ ಉತ್ತರವೇ ಸಿಗುತ್ತಿತ್ತೇನೋ?

ಚಸರಾರವರ ಅಪಾರ ಪ್ರತಿಭೆ, ಪದ ಬಂಢಾರ, ಸಂಗೀತ ಬಳಕೆ ಬಗ್ಗೆ ಎರೆಡು ಮಾತಿಲ್ಲ. ಅವರ ಲೇಖನಗಳಲ್ಲೇ ಒಮ್ಮೊಮ್ಮೆ ಕವಿತೆಯ ಸ್ಪರ್ಶವಿದೆ. ಈ ಹಾಡಿನಲ್ಲಿ ಅವರ ಪ್ರತಿಭೆಗಿಂತ ಅವರ ಮನದಾಳದ ಭಾವಗಳೇ ಹಾಡಾಗಿ ಮೂಡಿ ಬಂದಿದೆ ಎನಿಸುತ್ತದೆ. ಇಲ್ಲಿ ಎರೆಡು ರೀತಿಯ ಸ್ಪೂರ್ತಿಯ ಸೆಲೆ ಹಾಡಿಗೆ ಪ್ರೇರಣೆಯಾಗಿದೆ. ಕ್ರಿಸ್ತ, ಆತನ ಮಾನವ ಪ್ರೇಮ, ಮಾನವತೆ ಒಂದು ಸ್ಪೂರ್ತಿಯಾದರೆ, ತನ್ನ ಜನರ ನೋವು, ಭಾರ, ಆ ನೋವಿಗೆ ದನಿಯಾಗುವ, ಹೆಗಲಾಗುವ, ಭಾರವನ್ನು ಹಗುರಾಗಿಸುವ ವ್ಯಕ್ತಿಯೊಬ್ಬನ ಆಸೆ ಮತ್ತೊಂದು ಸ್ಪೂರ್ತಿ. ಹಾಡು ಹಂತ ಹಂತವಾಗಿ ಸ್ಪೂರ್ತಿಯನ್ನು  ಬೇಡುತ್ತಾ, ಸ್ಪೂರ್ತಿ ಪಡೆಯುತ್ತಾ ಕೊನೆಗೆ ತಾನೇ ಮತ್ತೊಬ್ಬರಿಗೆ ಸ್ಪೂರ್ತಿಯಾಗುವ ಬಯಕೆಯನ್ನು ತೋಡಿಕೊಳ್ಳುತ್ತದೆ.

ಮೊದಲ ಸಾಲುಗಳಲ್ಲಿ ಕ್ರಿಸ್ತನ ಭಾವವು, ಆತನ ಪ್ರೇಮವು ಸ್ಪೂರ್ತಿಯಾಗಲಿ ಎಂಬ ಪ್ರಾರ್ಥನೆ ಇದೆ. ಕ್ರಿಸ್ತನ ಯಾವ ಭಾವಗಳು ಎಂಬ ವಿವರಗಳು ಇಲ್ಲಿಲ್ಲ. ಅದು ಕ್ರಿಸ್ತನ, ಕ್ಷಮಾ ಭಾವವಿರಬಹುದು, ಸಹನೆ, ಕ್ರಾಂತಿಕಾರಕ ಧೋರಣೆಯ ಭಾವವೂ ಇರಬಹುದು.  ಇನ್ನೂ ’ಕ್ರಿಸ್ತನ ಪ್ರೇಮವು’ ಎಂಬುದು ಆತನ  ಮಾನವತಾ ಪ್ರೇಮ, ದಲಿತರ, ನೊಂದವರ, ಜೀವನದ ಜಂಜಾಟದಿಂದ ಬಳಲುವವರ ಪರವಾದ ಕಾಳಜಿಯ ಭಾವವೂ ಇರಬಹುದು.  ಅದೆಲ್ಲವೂ ’ನನ್ನ ಪ್ರೇಮದ ಕಾವ್ಯಕ್ಕೆ ಸ್ಪೂರ್ತಿಯಾಗಲಿ’ ಎನ್ನುವಾಗ ಅಲ್ಲಿ ರಚನಾಕಾರರ ಉದ್ದೇಶಗಳ ಪರಿಚಯವೂ ಆಗಿ, ಅದಕ್ಕೆ ಕ್ರಿಸ್ತ ಸ್ಪೂರ್ತಿಯಾಗಲಿ ಎನ್ನುವುದರೊಂದಿಗೆ ಪ್ರಾರ್ಥನೆಗೊಂದು ಪೂರ್ಣತೆ ದೊರೆಯುತ್ತದೆ.

ಇನ್ನೂ ಹಾಡಿನ ಮೊದಲ ಚರಣದಲ್ಲಿ, ’ಭಾವರಹಿತ ಹೃದಯಗಳ’ ಬಗ್ಗೆ ಪ್ರಾರ್ಥನೆ ಇದೆ. ಗೆತ್ಸೆಮನಿ ತೋಪಿನಲ್ಲಿ ಯೇಸು ಪ್ರಾರ್ಥಿಸುವಾಗ ಬಹಳವಾಗಿ ನೊಂದುಕೊಂಡಿದ್ದು ಇದೇ ಭಾವರಹಿತರ ಬಗ್ಗೆಯೇ. ನಿಜ ದೇವರನ್ನು, ದೇವರ ಆಶಯವನ್ನು ತಿಳಿಯದ ನಿರ್ಲಿಪ್ತ ಜನರ ಬಗ್ಗೆ ಯೇಸು ಅನೇಕ ಕಡೆ ಬೇಸರ ವ್ಯಕ್ತಪಡಿಸುವುದನ್ನು ಬೈಬಲ್ ನಲ್ಲಿ ಕಾಣಬಹುದಾಗಿದೆ. ಸದಯ ಸಮಾರಿತನ ಸಾಮತಿಯಲ್ಲಿ ಸಹಾ ಗಾಯಾಳುವಿಗಾಗಿ ಮರುಗದ ಭಾವರಹಿತ ಯಾಜಕ ಹಾಗೂ ಲೇವಿಯವನಿಗಿಂತ ಸಮಾರಿತನ ಹೃದಯ ವೈಶಾಲ್ಯದಿಂದಾಗಿ ಆತನೇ ನೆರೆಯವನು ಎಂದು ಯೇಸು ಹೇಳುತ್ತಾರೆ. ನಿಜ ದೇವರನ್ನು ಅರಿಯದವರು ’ಭಾವರಹಿತರಾದರೆ’ , ಪರರ ಕಷ್ಟಗಳಿಗೆ ಸ್ಪಂದಿಸದವರೂ  ಅದೇ ಸಾಲಿಗೆ ಸೇರುತ್ತಾರೆ.  ಜಗತ್ತಿನಲ್ಲಿ ನಡೆಯುವ ಅನೇಕ ತಪ್ಪುಗಳಿಗೆ ದುಷ್ಟರ  ದುಷ್ಟತನ ಎಷ್ಟು ಕಾರಣವೋ, ಒಳ್ಳೆಯವರ ಮೌನವೂ ಅಷ್ಟೇ ದೊಡ್ಡ ಕಾರಣ ಎಂಬರ್ಥದ ಮಾತುಗಳನ್ನು ಮಾರ್ಟಿನ್ ಲೂಥರ್ ಹೇಳುತ್ತಾರೆ.ಇಂತಹ ಭಾವರಹಿತರಲ್ಲಿ ಕ್ರಿಸ್ತನ ಸ್ಪೂರ್ತಿ ಹರಿಯಲಿ ಎಂಬ  ಸಾಲು ನಿಜಕ್ಕೂ ಅರ್ಥಗರ್ಭಿತ.

ಮುಂದಿನ ಸಾಲು  ದುಡಿದು ಬೆಂದ ಜನರನ್ನು  ಕ್ರಿಸ್ತನ ಸ್ಪೂರ್ತಿ ತಣಿಸಲಿ ಎನ್ನುತ್ತದೆ. ಇದೂ ಕೂಡ ಕ್ರಿಸ್ತನ ಆಶಯವೇ. ’ದುಡಿದು ಬಳಲಿದ ಜನರೇ, ಬನ್ನಿ ನನ್ನ ಬಳಿಗೆ ನಾ ನೀಡುವೆ ನಿಮಗೆ ವಿಶ್ರಾಂತಿಯ’ ಎಂಬ ಯೇಸುವಿನ ಕರೆ ಈ ಸಾಲಿಗೆ ಸ್ಪೂರ್ತಿಯೇನೋ. ವಿಶ್ರಾಂತಿಯ ಸ್ಪೂರ್ತಿ ನಿಜಕ್ಕೂ ದುಡಿದ ಜನರ ಮನವನ್ನು ತಣಿಸಬಲ್ಲದು ಹಾಗೂ ಅನಿವಾರ್ಯವಾದ ದುಡಿತದ ಶ್ರಮವನ್ನುಸಹನೀಯಗೊಳಿಸಬಹುದು. ಇನ್ನೂ, ಬಿತ್ತಿದ ಬೀಜ ಚಿಗುರಲು, ಬೆಳೆಯಲು, ಹೆಮ್ಮರವಾಗಲು ಬೆಳಕು, ಬೆಳಕಿನ ಕಾವು ಅವಶ್ಯ. ಅಂತೆಯೇ ಭರವಸೆ, ಆಸೆ, ಕನಸುಗಳು ಚಿಗುರಲು, ಬೆಳೆಯಲು ಕ್ರಿಸ್ತನ ಪ್ರೇಮದ ಬೆಚ್ಚನೆಯ ಸ್ಪರ್ಶ, ಕಾವು ಅವಶ್ಯ. ಆ ಪ್ರೀತಿಯ ಕಾವಿನಲ್ಲಿ ಎಲ್ಲವೂ ಚಿಗುರಲಿ ಎಂಬ ಆಶಯದೊಂದಿಗೆ ಮೊದಲ ಚರಣ ಮುಗಿಯುತ್ತದೆ.

ಮುಂದೆ ಹಾಡಿನ ಗಮನ ಹರಿಯುವುದು ’ತುಳಿತದಿಂದ ನರಳುತ್ತಿರುವ ಜನರತ್ತ’.  ಎಲ್ಲಾ ರೀತಿಯ ಶೋಷಣೆಗೆ ಒಳಗಾದ ಜನರು ಇಲ್ಲಿ ನೆನಪಾಗುತ್ತಾರೆ. ಜಾತಿಯ ಶೋಷಣೆಗೊಳಗಾದ ದಲಿತ, ಸಂಖ್ಯಾಬಲದ ಕಾರಣ ನಿರ್ಲಕ್ಷ್ಯಕ್ಕೊಳಗಾಗುವ  ಅಲ್ಪಸಂಖ್ಯಾತ, ಕೌಟಂಬಿಕ ದೌರ್ಜನ್ಯ ಎದುರಿಸುವ ಮಹಿಳೆ, ತನ್ನದೇ ನೆಲದಲ್ಲಿ ಪರಕೀಯನಾದ ಕನ್ನಡ ಕ್ರೈಸ್ತ ಎಲ್ಲರಿಗೂ ಈ ಸಾಲಿನಲ್ಲಿ ಪಾಲಿದೆ. ಅಂತಹ ಜನತೆಗೆ ಒಳ್ಳೆಯ ದಿನಗಳು ಬರಲಿ, ಆ ದಿನಗಳಿಗೆ ಆಸೆಯಿಂದ ಕಾಯುವ , ನಿರೀಕ್ಷಿಸುವ ಸಹನೆಗೆ ಬೇಕಾದ ಸ್ಪೂರ್ತಿಯನ್ನು ಅವರಿಗೆ ನೀಡು ಎಂದು ಈ ಸಾಲುಗಳು ಬೇಡಿಕೊಳ್ಳುತ್ತದೆ. ಅಲ್ಲಿಯವರೆಗೂ ಅವರ ನೋವನ್ನು ನೀಗಿಸು ಎಂಬ ಬೇಡಿಕೆಯೂ ಅಲ್ಲಿದೆ.

'Helping hands are better than praying lips'  ಎಂಬ ಮಾತನ್ನು ನೆನಪಿಸುವ ಸಾಲುಗಳು ಮುಂದೆ ಬರುತ್ತವೆ. ಪ್ರಾರ್ಥನೆಗಿಂತ ಸಹಾಯ ನೀಡುವ ಕರಗಳು ಉತ್ತಮ ಎಂಬುದು ಇದರ ಅರ್ಥವಾದರೂ, ಪ್ರಾರ್ಥನೆಯೊಂದಿಗೆ ನಮ್ಮ ಕ್ರಿಯಾಶೀಲ ಪ್ರಯತ್ನವೂ ಆಗಬೇಕು ಎನ್ನುವುದು ಅದರ ವಿಶಾಲ ಅರ್ಥ. ಭಾವರಹಿತ ಹೃದಯಗಳಿಗೆ, ಬೆಂದ ಜನರಿಗೆ, ಶೋಷಣೆಗೊಳಗಾದ ಜನರಿಗೆ ಬೇಡಿಕೊಂಡ ರಚನಾಕಾರರು ಇಲ್ಲಿ ತಮ್ಮ ಪಾತ್ರದ ಬಗ್ಗೆ ಯೋಚಿಸತೊಡುಗುತ್ತಾರೆ. ಇಲ್ಲಿ ಚಸರಾರವರ ನಿಲುವು, ನೈಜ ಕಾಳಜಿ, ಭಾವ ತೆರೆದುಕೊಳ್ಳುತ್ತದೆ. ಎಲ್ಲಾ ಜನರಿಗಾಗಿ ಕ್ರಿಸ್ತ ನೀನು ಸ್ಪೂರ್ತಿಯಾಗುವುದರ ಜೊತೆಗೆ ಅವರ ನೆರವಿಗೆ ನನ್ನ ದನಿಯು ಸೇರಲಿ ಎಂಬ ಆಶಯ ಈ ಸಾಲಿನಲ್ಲಿದೆ. ಕೇವಲ ಪಾರ್ಥಿಸುವುದು ಮಾತ್ರವಲ್ಲದೆ ನಮ್ಮ ಕೊಡುಗೆಯೂ ಇರಬೇಕು ಎನ್ನುವುದು ಇಲ್ಲಿದೆ. ನೊಂದವರ, ಬಳಲಿದವರ, ಶೋಷಿತರ ಪರವಾಗಿ ನಿಲ್ಲುವುದೆಂದರೆ ಅವರಿಗಾಗಿ ದನಿ ಎತ್ತುವುದು, ಅವರ ಜೊತೆ ಬಳಲುವುದು, ಅವರಿಗಾಗಿ ನರಳವುದು ಎಲ್ಲವೂ ಸೇರಿಕೊಳ್ಳುತ್ತದೆ. ನಮ್ಮ ತೊಡಗುವಿಕೆ ಅವರಿಗೆ ಸಾಂತ್ವನ ನೀಡಲಿ, ಅವರ ಜಂಜಾಟದ ಬದುಕಿಗೆ ನಮ್ಮ ನೆರವು ಸ್ಪೂರ್ತಿಯಾಗಲಿ ಎಂಬ ಉದಾತ್ತ ಆಶಯದೊಂದಿಗೆ ಹಾಡು ಪದಗಳಲ್ಲಿ, ಶಬ್ದಗಳಲ್ಲಿ ಮುಕ್ತಾಯಗೊಂಡರೂ ಅಂತರಂಗದ ಆಲಾಪವಾಗಿ ಮುಂದುವರಿಯುತ್ತದೆ.

ಏಳೆಂಟು ಸಾಲುಗಳ ಈ ಹಾಡಿನಲ್ಲಿ ಫಾ ಚಸರಾರವರ ಅಶಯ ಇನ್ನೇನಿತ್ತೋ? ನನಗೆ ಗೋಚರವಾದ  ಭಾವಗಳು ಇವು.  ಒಮ್ಮೆ ಒಂದು ಗೀತೆ ಕೇಳುಗನನ್ನು ಮುಟ್ಟುತ್ತಿದ್ದಂತೆ ಅದು ರಚನಾಕಾರ, ಸಂಗೀತ ನಿರ್ದೇಶಕನ ಸ್ವತ್ತಲ್ಲ, ಇನ್ನೇನ್ನಿದ್ದರೂ ಕೇಳುಗನಿಗೆ ಸೇರಿದ್ದೂ ಎನ್ನುತ್ತಾರೆ ಕನ್ನಡದ ಕವಿಯೊಬ್ಬರು. ಆ ಮಾತಂತೆ ರಚನಾಕಾರರ ಆಶಯಕ್ಕೆ ಕೇಳುಗರಿಗೆ ಗೋಚರಿಸುವ ಅರ್ಥಗಳೂ ಸೇರಿಕೊಂಡಾಗ ಒಂದು ಗೀತೆ ಅಮರವಾಗುತ್ತದೆ.  ಕಳೆದ ಇಪ್ಪತ್ತು ವರ್ಷಗಳಲ್ಲಿ ’ಸ್ಫೂರ್ತಿಯಾಗಲಿ ಕ್ರಿಸ್ತ’ ಕನ್ನಡ ಕ್ರೈಸ್ತ ಜನಪದ ಭಾಗವಾಗಿ ಉಳಿದು ಹೋಗಿದೆ ಎಂದರೆ ತಪ್ಪಾಗಲಾರದೇನೋ.

ಮೊದಲೇ ಹೇಳಿದಂತೆ ಈ ಹಾಡಿನ ಭಾವ ತೀವ್ರತೆಯನ್ನು ಅತ್ಯಂತ ಸಮರ್ಥವಾಗಿ ಹಿಡಿದಿಟ್ಟಿರುವುದು ಹಾಡಿನ ವಾದ್ಯ ಸಂಯೋಜನೆ ಹಾಗೂ ಗಾಯನ. ಸಾಧು ಕೋಕಿಲರವರ ಸಂಗೀತದ ನೈಪುಣ್ಯ ಇಲ್ಲಿ ಉತ್ಕೃಷ್ಟ ಮಟ್ಟದಲ್ಲಿ ಹೊರ ಹೊಮ್ಮಿದೆ. ಯಾವ ಸಂಗೀತದ ಮಟ್ಟಿಗೆ ಯಾವ ವಾದ್ಯ ಬಳಕೆಯಾಗಬೇಕು ಎಂಬ ಆಯ್ಕೆಯಲ್ಲಿ ಸಾಧುರವರು ಯಾವಾಗಲೂ master class. ಚಸರಾರವರ ಸಾಹಿತ್ಯದಲ್ಲಿನ ಅಷ್ಟೂ ತನ್ಮಯತೆಯನ್ನು, ಆಳವನ್ನು ತಮ ಕಂಠದೊಳಗೆ ಬರಮಾಡಿಕೊಂಡಂತೆ ಗಾಯಕ ವಿಷ್ಣು ದನಿ ನೀಡಿದ್ದಾರೆ. ಒಬ್ಬ ಸಹೃದಯ ಕವಿಯ ಅಂತರಾಳದ ಭಾವಗಳಿಗೆ ಹೃದಯಸ್ಪರ್ಶಿ ಸಾಹಿತ್ಯ ಒದಗಿ ಬಂದು ಮನಮುಟ್ಟುವ ಸಂಗೀತ ಕೂಡಿಕೊಂಡು, ಹೃದಯದಿಂದ ಹೊಮ್ಮಿದಂತ ಗಾಯನ ಸೇರಿದರೆ ಏನಾಗಬಹುದೋ ಅದು ’ಸ್ಪೂರ್ತಿಯಾಗಲಿ ಕ್ರಿಸ್ತ’ ಹಾಡಿನಲ್ಲಿ ಆಗಿದೆ.


 ಇಂತಹ ಇನ್ನಷ್ಟು ಗೀತೆಗಳಿಗೆ ಕ್ರಿಸ್ತ ಸ್ಪೂರ್ತಿಯಾಗಲಿ.

Saturday, August 20, 2016

ನನ್ನ ಮೆಚ್ಚಿನ ಫಾ.ಚಸರಾ ಗೀತೆಗಳು - ಭಾಗ 1


ನಾನು ಹೇಳಿ ಕೇಳಿ ಫಾ.ಫೆಲಿಕ್ಸ್ ನೊರೋನ್ಹ ಹಾಡುಗಳ ಅಭಿಮಾನಿ. ಬಾಲ್ಯದಲ್ಲಿ ಅವರ ಗೀತೆಗಳನ್ನೇ ಕೇಳುತ್ತಾ ಬೆಳೆದವರು ನಾವೆಲ್ಲಾ. ಅವರ ಗೀತೆಗಳ ಮಾಧುರ್ಯಕ್ಕೆ, ಅವರ ಕಂಠಕ್ಕೆ, ಅವರ ಹಾಡುವ ಶೈಲಿಗೆ  ಮಾರುಹೋಗಿದ್ದ ನಾನು ಇಂದಿಗೂ ಅವರ ಹಾಡನ್ನು ಕೇಳಿದಾಗ ಉಲ್ಲಾಸಿತನಾಗುತ್ತೇನೆ. ಅವರ ಹಾಡುವ ಶೈಲಿಯನ್ನು ಅನುಸರಿಸಲು ಹೋಗಿ ಸೋತಿದ್ದೇನೆ. ಇಡೀ ೮೦ರ ದಶಕದಲ್ಲಿ ನಾವು, ಅಂದರೆ ನನ್ನ ವಯಸ್ಸಿನವರು, ಫಾ.ಫೆಲಿಕ್ಸ್, ಫಾ.ಮರಿಜೋ, ಸರಾ ಡಾಮನಿಕ್, ವಿನ್ಸೆಂಟ್, ಡೇವಿಡ್ ರವರ ಗೀತೆಗಳನ್ನು ಕೇಳುತ್ತಾ  ಹಾಗೂ ಇನ್ನೂ ಹಳೆಯ ಹಾಡುಗಳನ್ನು ಪೂಜೆಗಳಲ್ಲಿ ಹಾಡುತ್ತಾ ಬೆಳೆದವರು.

ಅದಕ್ಕಿಂತ ಮುಂಚೆ ೭೦ ದಶಕದಲ್ಲಿ  ಫಾ.ಫೆಲಿಕ್ಸ್, ಫಾ. ಫಾತಿರಾಜ್, ಫಾ.ಜಯನಾಥನ್ ಒಬ್ಬರಿಗಿಂತ ಒಬ್ಬರು ಅತ್ಯ್ತುತ್ತಮ ಎನ್ನುವಂತ ಹಾಡುಗಳನ್ನು ಕೊಟ್ಟರು ಎಂದು ನಮ್ಮ ಹಿರಿಯರು ನೆನಪಿಸಿಕೊಳ್ಳುತ್ತಾರೆ. ಅವೆಲ್ಲಾ ಇಂದಿಗೂ ನಮ್ಮ ಪೂಜೆಗಳಲ್ಲಿ ಜನಪ್ರಿಯ ಗೀತೆಗಳೇ. ಅದಕ್ಕಿಂತ ಮುಂಚಿನ ಹಾಡುಗಳ ರಚನಾಕಾರರ ಪರಿಚಯ ನನಗಷ್ಟಿಲ್ಲ. ಮೊದಲು ಅಮೃತ, ಈಗ ಚೇತನ ಈ ಎಲ್ಲಾ ಗೀತೆಗಳನ್ನು ತನ್ನ ಒಡಲಾಳದಲ್ಲಿಟ್ಟುಕೊಂಡು ಕನ್ನಡ ಕ್ರೈಸ್ತ ಭಕ್ತಿಗೀತೆಗಳ ಶ್ರೀಮಂತಿಕೆಗೆ ಸಾಕ್ಷಿಯಾಗಿದೆ. ೮೦ರ ದಶಕದ ಕೊನೆಯಲ್ಲಿ ಬ್ರದರ್ ಚಿನ್ನು ಚೇತನ, ಅಭಿಷೇಕದಂತ ಕ್ಯಾಸೆಟ್ ಗಳ  ಮೂಲಕ ಅತ್ತ್ಯುತ್ತಮ ಎನ್ನಬಹುದಾದ ಗೀತೆಗಳಿಂದ ಗಮನಸೆಳೆದರೂ ಅಕಾಲಿಕವಾಗಿ ನಮ್ಮನ್ನು ಅಗಲಿದರು.

ಈ ಎಲ್ಲದರ ನಡುವೆ ಕನ್ನಡ ಕ್ರೈಸ್ತ ಲೋಕಕ್ಕೆ ಫಾ.ಚಸರಾ ತಂದ ಹೊಳಪು ’ಮಿಂಚಿನಂತೆ ಮಿನುಗಿ ಬಂದ’ ಎಂಬ ಅವರದೇ ಸಾಲನ್ನು ನೆನಪಿಸುತ್ತದೆ. ಕನ್ನಡ ಭಕ್ತಿಗೀತೆಗಳ ಲೋಕಕ್ಕೆ ಫಾ.ಚಸರಾರ ಸಾಹಿತ್ಯ ಸಂಗೀತದ ಬಗ್ಗೆ ಬರೆಯುತ್ತಾ ಹೋದರೆ ಅದೇ ಒಂದು ದೊಡ್ಡ ಅಧ್ಯಾಯವಾದೀತು. ಕನ್ನಡ ಕ್ರೈಸ್ತ ಸಂಗೀತದ ಅಷ್ಟೂ ಇತಿಹಾಸ, ಸತ್ವವನ್ನು ಹೀರಿಕೊಂಡು, ತಮ್ಮದೇ ಆದ ಹೊಸ ಬಗೆಯ ಸಾಹಿತ್ಯವನ್ನು ಪರಿಚಯಿಸುತ್ತಾ, ಮುಂದಿನ ಪೀಳಿಗೆಗೆ ಸ್ಪೂರ್ತಿಯಾಗಿ, ಅಳತೆಗೋಲಾಗಿ ನಿಂತ ಅವರ ಕೊಡುಗೆ ನಿಜಕ್ಕೂ ಅಧ್ಯಯನಕ್ಕೆ ಯೋಗ್ಯವಾಗಿದೆ.

ಅದಿನ್ನೂ ನೆನಪಿದೆ ’ಸ್ಪಂದನ’ ಕ್ಯಾಸೆಟ್ ಬಿಡುಗಡೆ ಆದ ಸಂದರ್ಭ. ಸರಾ, ವಿನ್ಸೆಂಟ್, ಡೇವಿಡ್, ಬ್ರದರ್ ಚಿನ್ನುರವರ ಕ್ಯಾಸೆಟ್ ಗಳೂ ಅದೇ ಸಮಯದಲ್ಲಿ ಬಂದಿತ್ತು. ಅದೊಂದು  ಕನ್ನಡ ಭಕ್ತಿ ಗೀತೆಗಳ ಭರ್ಜರಿ ಬೆಳೆಯ ಕಾಲ. ಅಗ ಬಂದ ’ಸ್ಪಂದನ’ವನ್ನು ಕನ್ನಡಿಗರು  ಆತ್ಮೀಯವಾಗಿಯೇ ಬರಮಾಡಿಕೊಂಡರು. ಫಾ.ಐ.ಚಿನ್ನಪ್ಪ ಸುಮಾರು ೩೦ ಕ್ಯಾಸೆಟ್‍ಗಳಿದ್ದ ಬಾಕ್ಸ್ ವೊಂದನ್ನು ನನ್ನ ತಂದೆಗೆ ಕೊಟ್ಟು, " ಚಸರಾ ಸಾಮೇರು ಮಾಡಿರೋ ಕ್ಯಾಸೆಟ್, ಮಾರಿಕೊಡು" ಎಂದು ಹೇಳಿದ್ದು ನನಗಿನ್ನು ನೆನಪಿದೆ.  ಪರಿಚಿತರಿಗೆ ಮಾರುವಷ್ಟು ಮಾರಿ, ಮದುವೆ ಸಮಾರಂಭಗಳಲ್ಲಿ ಕವರಿನ ಜೊತೆಗೆ ಒಂದು ಕ್ಯಾಸೆಟ್‍ನ್ನು ಉಡುಗೊರೆಯಾಗಿ ಕೊಡುತ್ತಿದ್ದರು ನನ್ನ ತಂದೆ.

ಇತ್ತೀಚಿನ ’ಮಾತುಕತೆ’ಯ ಸಂಚಿಕೆಯಲ್ಲಿ ಫಾ.ಕಾಂತರಾಜ್ ರವರು ಫಾ.ಚಸರಾವರ ಆಪ್ತವಲಯದ ಒಬ್ಬರಾಗಿ, ಅವರ  ಸಂಗೀತ ಕೃಷಿಯ ಬಗ್ಗೆ ತಾವು ಕಂಡ ಘಟನೆಗಳೊಂದಿಗೆ ಸವಿಸ್ತಾರವಾಗಿ ಬರೆದಿದ್ದು ಬಹಳ ಚನ್ನಾಗಿತ್ತು. ಅದು ಒಂದು ರೀತಿಯ insider view. ಒಬ್ಬ ಸಾಮಾನ್ಯ ಕೇಳುಗನಾಗಿ, ಸಂಗೀತದ ಅಭಿಮಾನಿಯಾಗಿ ಫಾ.ಚಸರಾರವರ  ನನ್ನ ಮೆಚ್ಚಿನ ಕೆಲವು ಗೀತೆಗಳ ಬಗ್ಗೆ ಬರೆಯುವ ಆಸೆ ನನ್ನದು. ತೀರ ನನ್ನದೇ ಆದ ಕಾರಣಗಳಿಂದ ಇಷ್ಟವಾಗುವ  ಹಾಡುಗಳ ಬಗ್ಗೆ ಸಾರ್ವತ್ರಿಕವಾಗಿ ಬರೆಯಬಹುದೇ ಎಂಬ ಗೊಂದಲವಿದ್ದರೂಕೆಲವು ಓದುಗರ ಅನುಭವವೂ ಅದೇ ರೀತಿಯದ್ದಾಗಿರಬಹುದು ಎಂಬ ನಂಬಿಕೆಯಲ್ಲಿ ಬರೆಯುತ್ತಾ ಹೋಗಲು ಪ್ರಯತ್ನಿಸುತ್ತೇನೆ. ನಾನೇನು ಉತ್ತಮ ಸಂಗೀತಗಾರನಲ್ಲ, ಗಾಯಕನಲ್ಲ. ಆದರೆ ಉತ್ತಮ ಕೇಳುಗನಂತೂ ಹೌದು. ಇದೇ ಅನುಭವದಿಂದ ಮಾತ್ರ ಬರೆಯಬಲ್ಲೆ.

ಮೊದಲಿಗೆ, ನಾನು ಬರೆಯಬೇಕೆಂದಿರುವುದು ’ಸ್ಪೂರ್ತಿ’ ಕ್ಯಾಸೆಟ್ಟಿನ ’ಸ್ಪೂರ್ತಿಯಾಗಲಿ ಕ್ರಿಸ್ತ ಎಂಬ ಗೀತೆ. ೨೦೦ಕ್ಕೂ ಹೆಚ್ಚಿನ ಚಸರಾ ಹಾಡುಗಳಲ್ಲಿ "ನಿಮ್ಮಗ್ಯಾವುದು ಇಷ್ಟ"? ಎಂದು ಕೇಳಿದರೆ, ಉತ್ತರಿಸುವುದು ಕಷ್ಟವೇನೋ. ಆದರೆ ನನಗೆ ಮಾತ್ರ ಈ ವಿಷಯದಲ್ಲಿ ಯಾವುದೇ ಗೊಂದಲವಿಲ್ಲ. ಯಾವ ಸಮಯದಲ್ಲಿ, ಎಲ್ಲೇ ಕೇಳಿದರೂ ಚಸರಾರವರ ನನ್ನ ಅತ್ಯಂತ ಮೆಚ್ಚಿನ ಗೀತೆ ’ಸ್ಪೂರ್ತಿಯಾಗಲಿ ಕ್ರಿಸ್ತ’ ಎಂದೇ ಹೇಳುತ್ತೇನೆ. ಈ ಗೀತೆ ನನಗ್ಯಾಕಷ್ಟು ಇಷ್ಟ ಎಂದು ಹೇಳುವುದು ಸ್ವಲ್ಪ ಕಷ್ಟವೇ.  ಆದರೆ ಸಂಗೀತ, ಸಾಹಿತ್ಯ ಹಾಗೂ ವಾದ್ಯ ಸಂಯೋಜನೆ ಎಲ್ಲವೂ ಅತ್ತ್ಯುತ್ತಮವಾಗಿ ಒಂದಕ್ಕೊಂದು ಒದಗಿ ಬಂದರೆ ಏನಾಗಬಹುದೋ ಅದು ’ಸ್ಪೂರ್ತಿಯಾಗಲಿ ಕ್ರಿಸ್ತ’ ಗೀತೆಯಲ್ಲಿ ಆಗಿದೆ.  ಹಾಗೆಯೇ, ಒಬ್ಬ ಗೀತರಚನಾಕಾರನ ವ್ಯಕ್ತಿತ್ವ, ನಿಲುವುಗಳ ಪರಿಚಯ ಆತ ರಚಿಸಿದ ಒಂದು ಹಾಡಿನಲ್ಲಿ ಸಿಗುವುದು ಅಪರೂಪ. ಆದರೆ ಫಾ.ಚಸರಾ ನಂಬಿಕೊಂಡ ಸಿದ್ಧಾಂತ, ಕ್ರಿಸ್ತನನ್ನು ಅರ್ಥಮಾಡಿಕೊಂಡ ಪರಿ, ತನ್ನ ಪಾತ್ರದ ಬಗೆಗಿನ ನಿರೀಕ್ಷೆಯ  ಒಂದು ಸಣ್ಣ ಪರಿಚಯ ಇಲ್ಲಿನ ಅವರ ಸಾಹಿತ್ಯದಲ್ಲಿ ನಮಗೆ ಕಾಣಸಿಗುತ್ತದೆ. ಆ ನಿಟ್ಟಿನಲ್ಲಿ ಚಸರಾರವರ ಅತ್ಯಂತ ಮಹತ್ವದ ಗೀತೆಗಳಲ್ಲಿ ಇದು ಒಂದು ಎಂಬುದು ನನ್ನ ಭಾವನೆ. ಹಾಡಿಗಿಂತ ಮುಂಚೆ ಸ್ಪೂರ್ತಿ ಕ್ಯಾಸೆಟ್ಟಿನ ಆರಂಭದ ನಿರೂಪಣೆಯ ಬಗ್ಗೆ ಹೇಳಲೇಬೇಕು

"ಈ ಜೀವನ ಸಂಕೀರ್ಣತೆಯ ಒಂದು ಮೊತ್ತ 
ಇದರಲ್ಲಿ ನೋವು-ನಲಿವು, ಸೋಲು -ಗೆಲುವು ನಿತ್ಯ ನಿರಂತರ. 
ಆಶಾಕಿರಣಗಳು ಹತಾಶಾಕಿಡಿಗಳಾದಾಗ 
ಮಧುರ ಭಾವಗಳು ಭಗ್ನಗೊಂಡಾಗ
ಪ್ರಕೃತಿಯೇ ಪ್ರಳಯವಾದಾಗ ಕಾಲ ಚಕ್ರದ ನಿರಂತರತೆಯೊಂದಿಗೆ 
ಈ ಜೀವನ ಚಕ್ರವೂ ಉರಳಲು ಒಂದು ಅತೀತ ಶಕ್ತಿ
ಒಂದು ಸುಪ್ತ ಸ್ಪೂರ್ತಿ ಅಗತ್ಯ ಅನಿವಾರ್ಯ
ಈ ಸುಪ್ತ ಸ್ಪೂರ್ತಿಯ ಚೇತನ ಮೂರ್ತಿಯೇ ಭಗವಂತ ಯೇಸು ಕ್ರಿಸ್ತ 
ದೈವತ್ವಕ್ಕಿಂತ ಹೆಚ್ಚಾಗಿ ಮಾನವತೆಯನ್ನು ಪ್ರರ್ದಶಿಸಿದ, 
ಮಾನವನ ಮನದಾಳದಲ್ಲಿ ಮಾನವ ಧರ್ಮ 
ಸ್ಥಾಪಿಸಿ ಸಾರಿದ ವಿಶ್ವ ಮಾನವ ಯೇಸು ಕ್ರಿಸ್ತ


ಈ ಕ್ರಿಸ್ತ ಇತಿಹಾಸದವನಲ್ಲ. ಇಂದು ನಮ್ಮೊಡನೆ ನಮ್ಮೊಳಗೆ ಇರುವವನು
ಮಾನವನ ಕ್ಷಣ ಕ್ಷಣ ಸಮಸ್ಯೆಗಳಿಗೆ ಸ್ಪಂದಿಸಿ, 
ಚಿಂತನೆಗೆ ಸಾಂತ್ವನವಾಗಿ ಏಕಾಂತಕ್ಕೆ ಸ್ನೇಹಿತನಾಗಿ ಅಸತ್ಯ, ಅನ್ಯಾಯ, 
ಅಧರ್ಮಕ್ಕೆ ಸಾಕ್ಷಿಯಾಗಿಶೋಷಣೆ ತುಳಿತ ನರಳಾಟಕ್ಕೆ ನಮ್ಮೆಲ್ಲರ
 ನೆರಳಾಗಿ ನನ್ನ, ನಿಮ್ಮ ಜೀವನಕ್ಕೆ ಜೀವನ ಶೃತಿ, 
ನಿರಂತರ ಪ್ರೇರಣೆ, ಚಿರಂತನ ಸ್ಪೂರ್ತಿ

ಫಾ.ಚಸರಾರವರ ಧ್ವನಿಯಲ್ಲೇ ಬಂದಿರುವ ಆ ಆರಂಭಿಕ ಮಾತುಗಳು ಕೇವಲ ಒಂದು ನಿಮಿಷದಷ್ಟು ಮಾತ್ರವಿದೆ. ಆ ಒಂದು ನಿಮಿಷದಲ್ಲೇ ಇಡೀ ಕ್ಯಾಸಿಟ್ಟಿನ ಆಶಯವನ್ನು ಅಷ್ಟು ಅರ್ಥಗರ್ಭಿತವಾಗಿ ಹೇಳಲು ಚಸರಾರೊಬ್ಬರಿಗೇ ಸಾಧ್ಯವೇನೋ.  "ಈ ಜೀವನ ಸಂಕೀರ್ಣತೆಯ ಒಂದು ಮೊತ್ತ" ಎಂದು ಪ್ರಾರಂಭವಾಗುವ ಮಾತುಗಳು ನಮ್ಮ ಜೀವನದ ಅತ್ಯಂತ ಕಷ್ಟ ಕಾಲದಲ್ಲಿ ಬೇಕಾದ ಸ್ಪೂರ್ತಿಯ ಬಗ್ಗೆ ಹೇಳುತ್ತಾ ಸಾಗುತ್ತದೆ. ’ಆಶಾಕಿರಣಗಳು ಹತಾಶಾಕಿಡಿಗಳಾದಾಗ’, ’ಪ್ರಕೃತಿಯೇ ಪ್ರಳಯವಾದಾಗ’ ಎಂಬಂಥ ಫಾ.ಚಸರಾ ಬಳಸಿರುವ ಪದಗಳು, ರೂಪಕ ಹಾಗೂ ಕ್ರಿಸ್ತನ ಸ್ಪೂರ್ತಿ ಬಗೆಗಿನ ಮಾತುಗಳು ಒಂದು ಇಡೀ ಪೂಜೆಯ ಬೋಧನೆಗಿಂತ ಹೆಚ್ಚು ಪರಿಣಾಮಕ್ಕಾರಿಯಾಗಿದೆ. 

ಅದೆಷ್ಟು ಬಾರಿ ಕೇಳಿದರೂ ಹೊಸದಾಗಿಯೇ ಕೇಳಿದಂತೆ ಅನಿಸುವ ನಿರೂಪಣೆಯನ್ನುಒಂದೇ ಗುಟುಕಿನಲ್ಲಿ, ಒಂದೇ ಕೇಳುವಿಕೆಯಲ್ಲಿ ಪೂರ್ಣವಾಗಿ ಗ್ರಹಿಸುವುದು  ಕಷ್ಟವೇ.  ಒಂದು ಕ್ಯಾಸೆಟ್ಟಿಗೆ ಇದಕ್ಕಿಂತ ಒಳ್ಳೆಯ, ಉತ್ಕೃಷ್ಟವಾದ ನಿರೂಪಣೆ ಬರೆಯುವುದೂ ಕಷ್ಟವೇ.

ಈ ನಿರೂಪಣೆ ಚಸರಾರವರ ಮಾಧುರ್ಯಭರಿತ ಪದಗಳಿಂದ ಅದ್ದಿ ತೆಗೆದಂತಿದೆ. ಒಂದು ಒಳ್ಳೆಯ ಮುಖ ಪುಟ ಒಂದು ಪುಸ್ತದ ಬಗೆಗಿನ  ಕುತೂಹಲ, ಭರವಸೆಯನ್ನು ಮೂಡಿಸುವಂತೆ ಇಡೀ ಕ್ಯಾಸಟ್ಟಿನ ಬಗ್ಗೆ ಒಂದು ರೀತಿಯ ನಿರೀಕ್ಷೆಯನ್ನು ಹುಟ್ಟಿಸುತ್ತದೆ ನಿರೂಪಣೆ.  ನಿರೀಕ್ಷೆ ಸುಳ್ಳಾಗುವುದಿಲ್ಲ, ಮುಂದೆ ಪ್ರಾರಂಭವಾಗುವುದೇ ಅದೇ ’ಸ್ಪೂರ್ತಿಯಾಗಲಿ ಕ್ರಿಸ್ತ’ ಗೀತೆ.  ಆ ಗೀತೆ ಕೇಳುವುದೇ ಒಂದು ವಿಶಿಷ್ಟ ಅನುಭವ.



ಮುಂದುವರಿಯುವುದು...

- ಪ್ರಶಾಂತ್ ಇಗ್ನೇಷಿಯಸ್